ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತವಾಗಿದ್ದು, ನಟೋರಿಯಸ್ ಸರಗಳ್ಳನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.
ಶಾಕೀರ್ ಗುಂಡೇಟು ತಿಂದ ಸರಗಳ್ಳ. ಚಂದ್ರಲೇಔಟ್ ಪಿಎಸ್ಐ ಸಂತೋಷ್ ನಾಯ್ಕ್, ಶಾಕೀರ್ ಎಡಗಾಲಿಗೆ ಗುಂಡು ಹಾರಿಸುವ ಮೂಲಕ ಆತನ ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಈ ಆರೋಪಿ ಪಶ್ಚಿಮ ವಲಯದ ಪೊಲೀಸರ ಪಾಲಿಗೆ ಸಿಂಹಸ್ವಪ್ನವಾಗಿದ್ದನು.
ದೂರದ ಉತ್ತರ ಪ್ರದೇಶದ ಮುಜಾಫರ್ ನಗರದಿಂದ ಶಾಕೀರ್ ಮತ್ತು ಮಹಮ್ಮದ್ ಡ್ಯಾನಿಶ್ ಬಂದಿದ್ದರು. ಇವರು ನಗರದ ಚಂದ್ರಲೇಔಟ್, ಸಿದ್ದಾಪುರ, ರಾಜಾಜಿನಗರದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಇಬ್ಬರ ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾರೆ. ಆದರೆ ಈ ವೇಳೆ ಆರೋಪಿ ಶಾಕೀರ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾನೆ. ನಂತರ ಆತ್ಮ ರಕ್ಷಣೆಗಾಗಿ ಆರೋಪಿ ಶಾಕೀರ್ ಕಾಲಿಗೆ ಶೂಟೌಟ್ ಮಾಡಿದ್ದಾರೆ ಎಂದು ಡಿಸಿಪಿ ರವಿಚನ್ನಣ್ಣನವರ್ ಹೇಳಿದ್ದಾರೆ.
ಸದ್ಯ ಆರೋಪಿ ಶಾಕೀರ್ ಹುಸೇನ್ ಹಾಗೂ ಆರೋಪಿಯಿಂದ ಗಾಯಗೊಂಡಿರುವ ಎಎಸ್ಐ ಕಾಳೇಗೌಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv