ಹಾವೇರಿ: ನಮ್ಮ ಸರ್ಕಾರದ ವಿರುದ್ಧ ಎಷ್ಟೇ ಆರೋಪ ಮಾಡಿದರೂ ಜನರು ಅದಕ್ಕೆ ಉತ್ತರ ನೀಡಿದ್ದಾರೆ. ಅಂತಹ ದೊಡ್ಡ ನಾಯಕರ ಮುಂದೆ ನನ್ನಂಥ ಸಾಮಾನ್ಯ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ ಎಂದು ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ (Yasir Khan Pathan) ಹೇಳಿದ್ದಾರೆ.
ಶಿಗ್ಗಾಂವಿ ಉಪಚುನಾವಣೆಯಲ್ಲಿ (Shiggaon By Election) ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಅವರನ್ನು ಹಿಂದಿಕ್ಕಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಭರ್ಜರಿ ಜಯಗಳಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮದ ಎಲ್ಲಾ ಜಾತಿಯ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿಯವರು (BJP) ಎಷ್ಟೆಲ್ಲಾ ಆರೋಪ ಮಾಡಿದರೂ ಜನರು ಉತ್ತರ ನೀಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಸಾಹೇಬ್ರು ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಶ್ರಮ ಇದೆ. ನನ್ನಂಥ ಮುಸ್ಲಿಂ ಸಮುದಾಯದ ಬಡ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? – ದೇವೇಂದ್ರ ಫಡ್ನವಿಸ್ ಹೇಳಿದ್ದೇನು?
ಬಿಜೆಪಿಯವರು ಸೋತ ಮೇಲೆ ಹಣದ ಹೊಳೆ ಹರಿಸಿದ್ದಾರೆ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಆದರೆ ಜನರಿಗೆ ಉತ್ತಮ ಆಡಳಿತ ಬೇಕಿದೆ. ಆದ್ದರಿಂದ ಈ ತೀರ್ಪು ನೀಡಿದ್ದಾರೆ ಎಂದರು. ಇದನ್ನೂ ಓದಿ: ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ
ಯಾಸಿರ್ ಪಠಾಣ್ ಗೆಲುವಿಗೆ ಕಾರಣಗಳು:
*ಶಿಗ್ಗಾಂವಿ ಕ್ಷೇತ್ರದಲ್ಲಿ ರಾಜೀ ರಾಜಕೀಯಕ್ಕೆ ಮುಕ್ತಿ ಹಾಡಿ ಗಂಭೀರವಾಗಿ ಕಾಂಗ್ರೆಸ್ ಚುನಾವಣೆ ಎದುರಿಸಿದ ಹಿನ್ನೆಲೆ ಪೈಲ್ವಾನ್ ಗೆಲುವು.
*ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾಂವಿಯಲ್ಲೇ ವಸತಿ ಹೂಡಿ ತಮ್ಮದೇ ಚುನಾವಣೆ ಎಂಬಂತೆ ಅಹಿಂದ ಮತದಾರರ ಓಲೈಕೆ ಮಾಡಿದ್ದರು.
*ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರರಲ್ಲಿ ಸ್ವಲ್ಪ ಮತದಾರರು ‘ಕೈ’ ಪರ ಮತ ಚಲಾವಣೆ.
*ಕಾಂಗ್ರೆಸ್ ಪಡೆ ಶಿಗ್ಗಾಂವಿಯಲ್ಲಿಯೇ ಬೀಡು ಬಿಟ್ಟು ಕ್ಯಾಂಪೇನ್ ಮಾಡಿದ್ದು ಪಠಾಣ್ಗೆ ವರವಾಯಿತು.
*ಖಾದ್ರಿ ಮನವೊಲಿಸಿ ಪಠಾಣ್ಗೆ ಜೋಡು ಮಾಡಿ ಚುನಾವಣೆ ಎದುರಿಸಿದ ಹಿನ್ನೆಲೆ ಪಠಾಣ್ ಗೆಲುವು ಸುಲಭ.
*ಬಿಜೆಪಿಯ ವಕ್ಫ್ ಅಸ್ತ್ರ ವಿಫಲ.
*ಬಸವರಾಜ ಬೊಮ್ಮಾಯಿ ಮೊದಲ ಸಲ ಬಹಳ ಪ್ರಬಲವಾಗಿ ಪ್ರಯೋಗಿಸಿದ್ದ ಹಿಂದುತ್ವ ಅಸ್ತ್ರ ವಿಫಲ.
*ಪಂಚಮಸಾಲಿ ಮತದಾರರು ‘ಕೈ’ ಕಡೆ ವಾಲಿದರು.
*ಪ್ರತಿ ಸಲ ಬೊಮ್ಮಾಯಿ ಪಾಲಾಗ್ತಿದ್ದ 10% ಮುಸ್ಲಿಂ ಮತಗಳೂ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದೆ.
*ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ಕುರುಬರು ‘ಕೈ’ ಬಲಪಡಿಸಲು ಮತ್ತೆ ಕೃಪೆ ತೋರಿದರು.