– 2024 ಡಿಸೆಂಬರ್ ಅವಧಿಯಲ್ಲಿ ಸಭೆ ನಡೆಸಿದ್ದ ಜಯಂತ್, ರೀನಾ
– ಮಹಿಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್
ಮಡಿಕೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala Temple) ವಿರುದ್ಧ ಷಡ್ಯಂತ್ರ ಎಸಗಿದ ಆರೋಪ ಹೊತ್ತಿರುವ ಬುರುಡೆ ಗ್ಯಾಂಗ್ ಸದಸ್ಯರು ಕಳೆದ ವರ್ಷ ಕೊಡಗು (Kodagu) ಜಿಲ್ಲೆಗೂ ಭೇಟಿ ನೀಡಿ ಜನತೆಯಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಗೊಂದಲ ಮೂಡಿಸಿ ಹುನ್ನಾರ ನಡೆಸಿದ ವಿಚಾರ ಈಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಕ್ಷೇತ್ರದ ಭಕ್ತರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದರು. ದೂರಿನಲ್ಲಿ ಸಮಗ್ರ ದಾಖಲೆ ನೀಡಿದ್ದರಿಂದ ವರಿಷ್ಠಾಧಿಕಾರಿಗಳು ಬುರುಡೆ ಗ್ಯಾಂಗ್ ಸದಸ್ಯರ ಕಪೋಲ ಕಲ್ಪಿತ ಕಾರ್ಯಾಚರಣೆಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದರು. ವಿಫಲಗೊಂಡ ಬೆನ್ನಲ್ಲೇ ಗ್ಯಾಂಗ್ ಸದಸ್ಯರು ಜಿಲ್ಲೆಯಿಂದ ಕಾಲ್ಕಿತ್ತಿದ್ದರು.
2024 ಡಿಸೆಂಬರ್ ಅವಧಿಯಲ್ಲಿ ಜಯಂತ್ ಟಿ(Jaynath.T) ರೀನಾ (Reena) ಸೇರಿದಂತೆ ಬೆಂಗಳೂರು ಮತ್ತು ಮಂಗಳೂರಿನ ಕೆಲವು ವ್ಯಕ್ತಿಗಳು ಕೊಡಗು ಜಿಲ್ಲೆಯ ವಿರಾಜಪೇಟೆ, ಶುಂಠಿ ಕೊಪ್ಪ ಕುಶಾಲನಗರ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿದ್ದರು. ಅಷ್ಟೇ ಅಲ್ಲದೇ ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರನ್ನು ಭೇಟಿ ಮಾಡಿ ಅವರ ಮೂಲಕ ಕೆಲವು ಕಪೋಲ ಕಲ್ಪಿತ ದೂರುಗಳನ್ನು ಪಡೆದು ಪೊಲೀಸ್ ಠಾಣೆಗೆ ನೀಡುವಲ್ಲಿ ಬಹುತೇಕ ಯಶಸ್ವಿಯಾಗಿದ್ದರು. ಇದನ್ನೂ ಓದಿ: ಎಸ್ಐಟಿ ವಿಚಾರಣೆಗೆ ಹಾಜರಾದ ಸೌಜನ್ಯ ಮಾವ ವಿಠಲ ಗೌಡ
ಗ್ರಾಮೀಣ ಭಾಗದ ಮಹಿಳೆಯರಿಂದ ಕ್ಷೇತ್ರದ ಯೋಜನೆ ಬಗ್ಗೆ ತಪ್ಪು ಮಾಹಿತಿಗಳನ್ನ ಒಳಗೊಂಡಂತೆ ವಿಡಿಯೋ ದಾಖಲಿಸಿ ನಂತರ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಸಹ ನಡೆಸಿದ್ದರು.
ವಿರಾಜಪೇಟೆ ಶುಂಠಿಕೊಪ್ಪ ಮತ್ತಿತರ ಕಡೆ ನೀಡಿರುವ ದೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ (Veerendra Heggade) ಮತ್ತು ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ (Anil Kumar) ಅವರುಗಳ ಹೆಸರನ್ನು ಸಹ ಉಲ್ಲೇಖಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ತಮಗೆ ಬೇಕಾದಂತೆ ಮಾಹಿತಿ ಕಲೆ ಹಾಕಿ ಕೆಲವು ಮಹಿಳೆಯರಿಂದ ಹೇಳಿಕೆ ಪಡೆದಿದ್ದರು. ಹೇಳಿಕೆ ಪಡೆದ ನಂತರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದರು. ವಿರಾಜಪೇಟೆ ಮತ್ತು ಶುಂಠಿಕೊಪ್ಪದಲ್ಲಿ ಎರಡು ಪ್ರಕರಣಗಳನ್ನು ದಾಖಲಿಸುವಲ್ಲಿ ಕೂಡ ಈ ತಂಡ ಬಹುತೇಕ ಯಶಸ್ವಿಯಾಗಿತ್ತು. ಇದನ್ನೂ ಓದಿ: ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್ ಮಟ್ಟಣ್ಣನವರ್: ಎಸ್ಐಟಿ ಮುಂದೆ ಜಯಂತ್ ಹೇಳಿಕೆ
ಮೈಕ್ರೋ ಫೈನಾನ್ಸ್ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಕೊಡಗು ಸೇರಿದಂತೆ ನೆರೆಯ ಮೈಸೂರು ಹಾಸನ, ಮಂಡ್ಯ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬುರುಡೆ ಗ್ಯಾಂಗ್ ಹಲವು ಸಭೆಗಳನ್ನು ನಡೆಸಿತ್ತು. ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅನಿಲ್ ಕುಮಾರ್ ಅವರ ಮೇಲೆ ದೂರು ದಾಖಲಿಸಲು ರೆಡಿಮೇಡ್ ದೂರಿನ ಪ್ರತಿಗಳನ್ನು ಕೂಡ ವಿತರಣೆ ಸಹ ಮಾಡಲಾಗಿತ್ತು. ಆದರೆ ಮಹಿಳಾ ಸದಸ್ಯರು ಆಸಕ್ತಿ ತೋರಿಸದ ಕಾರಣ ಈ ಬುರುಡೆ ಗ್ಯಾಂಗ್ ಜಿಲ್ಲೆಯಿಂದ ಕಾಲ್ಕಿತ್ತಿತ್ತು.