ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಆಸ್ತಿ ಪಾಸ್ತಿ ನಾಶ ಮಾಡಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಕರವೇ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕರವೇ ಹೋರಾಟಕ್ಕೆ ನಾನು ಬೆಂಬಲ ಮಾಡುತ್ತೇನೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ರಾಜ್ಯದಲ್ಲಿ ಕನ್ನಡ ನಾಮಫಲಕ (Kannada Nameboard) ಅಳವಡಿಕೆಗೆ ಕಾನೂನು ಜಾರಿ ಮಾಡುತ್ತಿದ್ದೇವೆ. ಸರೋಜಿನಿ ಮಹಿಷಿ ವರದಿ ಬಗ್ಗೆ ಎರಡು ಸದನದಲ್ಲಿ ಚರ್ಚೆ ಆಗಿ ಒಪ್ಪಿಗೆಯೂ ಸಿಕ್ಕಿದೆ. ಈಗ ರೂಲ್ಸ್ ಆಗಬೇಕು. ರೂಲ್ಸ್ ಮಾಡಲು 3 ಸಭೆ ಆಗಿದೆ. ಕಠಿಣ ರೂಲ್ಸ್ ಫ್ರೇಮ್ ಮಾಡುತ್ತೇವೆ. ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮತ್ತೊಂದು ಸಭೆ ಮಾಡಿ ಕಾನೂನು ಜಾರಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಜಾತಿಗಣತಿ ವರದಿ ಲೀಕ್ ಆಗಿಲ್ಲ- ವಿರೋಧ ಮಾಡೋರು ವರದಿ ಓದಲಿ: ಶಿವರಾಜ್ ತಂಗಡಗಿ
ನಾರಾಯಣಗೌಡರಿಗೆ ನಾನು ಬೆಂಬಲ ಕೊಡುತ್ತೇನೆ. ಆದರೆ ಬೇರೆಯವರಿಗೆ ತೊಂದರೆ ಕೊಡೋದು ಬೇಡ. ಅನ್ಯಭಾಷೆಯವರಿಗೆ ಗೌರವ ಕೊಡೋಣ. ಅವರಿಗೆ ಕನ್ನಡ ಕಲಿಸೋಣ. ಸಿಎಂ ಯಾವುದೇ ಬೋರ್ಡ್ನಲ್ಲಿ 60% ಕನ್ನಡ ಇರಬೇಕು ಎಂದು ಹೇಳಿದ್ದಾರೆ. 60% ಕಡ್ಡಾಯವಾಗಿ ಕನ್ನಡ ಬೋರ್ಡ್ ಹಾಕಬೇಕು. ಇದಕ್ಕಾಗಿ ಕಾನೂನು ತರುತ್ತಿದ್ದೇವೆ. ಬೆಳಗಾವಿ ಅಧಿವೇಶನದಿಂದ ಸಭೆ ಮಾಡೋದು ತಡವಾಯಿತು. ಆದಷ್ಟು ಬೇಗ ಕಾನೂನು ಮಾಡುತ್ತೇವೆ. ಕೇವಲ ರೂಲ್ಸ್ ಮಾಡೋದಲ್ಲ. ಇದರ ಜಾರಿಗೆ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕನ್ನಡ ಪರ ಹೋರಾಟಗಾರರ ಮೇಲಿನ ಕೇಸು ವಾಪಸ್ ಪಡೆಯಿರಿ: ಬಿ.ಕೆ.ಹರಿಪ್ರಸಾದ್
ಕೆಲ ಶಾಲೆಗಳಲ್ಲಿ ಕನ್ನಡವೇ ಕಲಿಸಲ್ಲ. ಕಾನೂನು ಮಾನಿಟರ್ ಮಾಡಲು ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಜೊತೆಗೂಡಿ ಕೆಲಸ ಮಾಡುತ್ತೇವೆ. ಕೇವಲ ಫೈನ್ ಹಾಕೋದಲ್ಲ, ಕನ್ನಡದಲ್ಲಿ ಬೋರ್ಡ್ ಹಾಕದೇ ಹೋದರೆ ಅಂಗಡಿ ಲೈಸೆನ್ಸ್ ಕ್ಯಾನ್ಸಲ್ ಮಾಡೋ ನಿಯಮ ಜಾರಿ ಮಾಡುತ್ತೇವೆ. ಶಾಲೆಗಳಲ್ಲಿ ಕನ್ನಡ ಕಲಿಸದೇ ಹೋದರೆ ಶಾಲೆಯ ಮಾನ್ಯತೆ ರದ್ದು ಕಾನೂನು ತರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂತರಾಜು ವರದಿ ಜಾರಿಗೆ ಒತ್ತಾಯಿಸಿ ಬೃಹತ್ ಮಟ್ಟದ ಅಹಿಂದಾ ಸಮಾವೇಶಕ್ಕೆ ಮುಹೂರ್ತ ಫಿಕ್ಸ್
ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡುತ್ತೇನೆ. ಹೋರಾಟ ಮಾಡಲಿ. ಆದರೆ ಬೇರೆಯವರಿಗೆ ತೊಂದರೆ ಕೊಡಬಾರದು. ಕಾನೂನು ಮಾಡಲು ಸಿದ್ಧತೆ ಆಗುತ್ತಿದೆ. ಸಂಘಟನೆಗಳ ಆಶಯದಂತೆ ಕಾನೂನು ಜಾರಿ ಮಾಡುತ್ತೇವೆ. ಹೀಗಾಗಿ ಯಾರೂ ಕಾನೂನು ಕೈಗೆ ಎತ್ತಿಕೊಳ್ಳುವುದು ಬೇಡ. ನಮ್ಮ ರಾಜ್ಯಕ್ಕೆ ಬರುವವರನ್ನು ಪ್ರೀತಿ ವಿಶ್ವಾಸದಿಂದ ನೋಡಿ. ನಮ್ಮ ಸರ್ಕಾರ ಕನ್ನಡದ ಪರ ಇದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ನಾವು ರಾಜೀ ಆಗೋ ಮಾತೇ ಇಲ್ಲ ಎಂದರು. ಇದನ್ನೂ ಓದಿ: ಸೋಮಾರಿ ಸಿದ್ದ ಪದ ಬಳಸಿದ್ದು ಸಿದ್ದರಾಮಯ್ಯರಿಗೆ ಅಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ