ಮಂಡ್ಯ/ಚಾಮರಾಜನಗರ: ಇಂದು 2020ರ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಗ್ರಹಣದ ವೇಳೆ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗುವುದು ಸಹಜ. ಆದರೆ ಇಂದು ಜರುಗುವ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳಿಲ್ಲ.
ಮಂಡ್ಯ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನ ಹಾಗೂ ರಂಗನಾಥಸ್ವಾಮಿ ದೇವಸ್ಥಾನಗಳಲ್ಲಿ ಗ್ರಹಣ ಪ್ರಯುಕ್ತ ಯಾವುದೇ ವಿಶೇಷ ಪೂಜೆಗಳು ಇಲ್ಲ. ಎಂದಿನಂತೆ ಪೂಜಾ ಕೈಂಕರ್ಯಗಳು ಮಾತ್ರ ಜರುಗಲಿವೆ.
ವಿಶೇಷ ಎಂದರೆ ಇಂದು ಹುಣ್ಣಿಮೆ ಇರುವ ಕಾರಣ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇದೆ. ಇನ್ನೂ ಪಂಚಾಂಗದಲ್ಲಿ ಈ ಗ್ರಹಣದ ನಿಮಿತಿ ವಿಶೇಷ ಪೂಜೆಗಳ ಉಲ್ಲೇಖ ಇಲ್ಲದ ಕಾರಣ ಯಾವುದೇ ವಿಶೇಷತೆಗಳು ಮಂಡ್ಯ ಜಿಲ್ಲೆಯ ದೇವಸ್ಥಾನಗಳಲ್ಲಿ ಇಲ್ಲ.
ಇತ್ತ ಚಾಮರಾಜನಗರ ಜಿಲ್ಲೆಯ ಚಾಮರಾಜೇಶ್ವರ, ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ, ಶಿವನಸಮುದ್ರದ ಮಧ್ಯರಂಗ ದೇವಾಲಯ, ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯ ಸೇರಿದಂತೆ ಯಾವುದೇ ದೇವಾಲಯಗಳಲ್ಲೂ ಕೂಡ ಗ್ರಹಣದ ವಿಶೇಷ ಪೂಜೆ ಇಲ್ಲ. ಇನ್ನೂ ಹುಣ್ಣಿಮೆ ಇರುವ ಹಿನ್ನೆಲೆಯಲ್ಲಿ ಎಂದಿನಂತೆ ಇಂದು ಸಹ ದೇವಾಲಯಗಳಲ್ಲಿ ವಿಶೇಷ ಪೂಜೆ ಇದೆ.