ಮುಡಾದಲ್ಲಿ ಜಿಲ್ಲಾಧಿಕಾರಿ ಪಾತ್ರವಿಲ್ಲ, ಲೋಕಾಯುಕ್ತರಿಗೆ ಸ್ಪಷ್ಟನೆ ನೀಡಿದ್ದೇನೆ: ಜಿ.ಕುಮಾರ ನಾಯಕ್

Public TV
2 Min Read
G Kumar Naik

ರಾಯಚೂರು: ಮುಡಾ ಪ್ರಕರಣ (MUDA Scam) ವಿಚಾರವಾಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರು ನನಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಏನೂ ಇಲ್ಲ ಎನ್ನುವುದನ್ನು ಸವಿವರವಾಗಿ ಹೇಳಿದ್ದೇನೆ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ್ (G Kumar Naik) ಹೇಳಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಪೊಲೀಸರ ವಿಚಾರಣೆಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪ ಆಗಿದೆ. ರಾಯಚೂರು (Raichuru) ಜಿಲ್ಲಾಧಿಕಾರಿಯಾದ ಬಳಿಕ 2002 ರಿಂದ 2005ವರೆಗೆ ಮೈಸೂರು ಜಿಲ್ಲಾಧಿಕಾರಿ ಆಗಿದ್ದೆ. 2005ರಲ್ಲಿ ಭೂ ಪರಿವರ್ತನೆ ಮಾಡಿರುವ ವಿಚಾರದಲ್ಲಿ ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿ ತಪ್ಪು ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ದೂರು ನೀಡುವವರಿಗೆ ಕಾನೂನಿನ ಆಯಾಮಗಳ ಮಾಹಿತಿ ಇದೆಯಾ? ಇಲ್ವಾ? ನನಗೆ ಗೊತ್ತಿಲ್ಲ. ಭೂ ಪರಿವರ್ತನೆ ಮಾಡಬೇಕಾದ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ, ಕಾನೂನು ಪಾಲನೆ ಮಾಡಲಾಗಿದೆ ಯಾವುದೇ ತಪ್ಪು ಜರುಗಿಲ್ಲ ಎಂದರು.ಇದನ್ನೂ ಓದಿ: ಪಕ್ಷದ ಉಳಿವಿಗಾಗಿ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು: ಸಾ.ರಾ ಮಹೇಶ್

1997-98ರಲ್ಲಿ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಆಗಿದೆ. ಆಗ ಭೂ ಸಂತ್ರಸ್ತರಿಗೆ ಬೆಲೆ ನಿಗದಿ ಮಾಡಲಾಗಿತ್ತು. ಅವಾರ್ಡ್ ಪಾಸ್ ಮಾಡಿದ 45 ದಿನದ ಒಳಗಾಗಿ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡಿನೋಟಿಫೀಕೇಷನ್ ಆಗಿದ್ದರಿಂದ 1998ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿತ್ತು. ಲ್ಯಾಂಡ್ ರೆಕಾರ್ಡ್ ಅಪಡೇಟ್ ಮಾಡಲಿ, ಬಿಡಲಿ ಅದು ರೈತರಿಗೆ ಹೋಗುತ್ತದೆ. ನಂತರ ಜಮೀನು ಕೈ ಬದಲಾವಣೆಯಾಗಿದೆ. ಬಳಿಕ ಆರು ವರ್ಷದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಭೂ ಪರಿವರ್ತನೆಗೆ ಅರ್ಜಿ ಹಾಕುತ್ತಾರೆ. ಸಾಮಾನ್ಯವಾಗಿ ಇದು ಎಲ್ಲಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿರುತ್ತದೆ. ಈ ಎಲ್ಲಾ ಪ್ರಕ್ರಿಯೆ ಮುಗಿಸಲು 120 ರಿಂದ 150 ದಿನ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ಒತ್ತಡ ಇಲ್ಲ ಎಂಬುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಡಿನೋಟಿಫಿಕೆಷನ್ ಆಗಿ ಆರು ವರ್ಷದ ನಂತರ ಭೂ ಪರಿವರ್ತನೆಗೆ ಬಂದಿತ್ತು. ವಸತಿ ಉದ್ದೇಶಕ್ಕಾಗಿ ಎಂದು ಮುಡಾದಿಂದ ಮಾಹಿತಿ ಪಡೆದ ನಂತರ ಪ್ರಕ್ರಿಯೆ ಮುಂದುವರೆಸಿದ್ದೇವೆ. ಜಿಲ್ಲಾಧಿಕಾರಿಯಾಗಿ ನನಗೆ ಅದನ್ನು ತಡೆಹಿಡಿಯಲು ಯಾವುದೇ ಕಾರಣ ಇರಲಿಲ್ಲ. ತಹಶೀಲ್ದಾರ ಸ್ಥಳ ಪರಿಶೀಲನೆ ಮಾಡಿದ್ದಾರೆ. ನಾನು ಸ್ಥಳ ಪರಿಶೀಲನೆ ಮಾಡಿದಾಗ ಯಾವುದೇ ಕುರುಹು ಕಂಡು ಬಂದಿರುವುದಿಲ್ಲ ಎನ್ನುವುದು ಕಡತದಲ್ಲಿದೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮದ ಹಗರಣದ ಹಣ ಬಳ್ಳಾರಿ, ರಾಯಚೂರು ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ನಿರಾಧಾರ ಆರೋಪ ಮಾಡುತ್ತಿದೆ. ಕೇಂದ್ರದ ಏಜನ್ಸಿ ಪರಿಶೀಲನೆ ಮಾಡುತ್ತಿದೆ. ವಾಲ್ಮೀಕಿ ನಿಗಮದ ಹಗರಣ ಬುಡಕಟ್ಟಿನ ಪ್ರಕರಣ. ಆದರೆ ಅದೇ ಬುಡಕಟ್ಟು ಸಮಾಜದವನಾದ ನನ್ನ ಮೇಲೆ ಈ ರೀತಿ ಆರೋಪ ಮಾಡುವುದು ಅಮಾನವೀಯ. ಇದು ಕೇಂದ್ರದ ತನಿಖೆಯಲ್ಲಿದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.ಇದನ್ನೂ ಓದಿ: ಜಮ್ಮು-ಕಾಶ್ಮೀರ| ಕಾರ್ಮಿಕನ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

Share This Article