-ರಾಜಕಾರಣದಲ್ಲಿ ಸಾಹಿತಿಗಳಿಗೆ ಜಾಗವಿಲ್ಲ
ಧಾರವಾಡ: ಇಂದಿನ ರಾಜಕಾರಣದಲ್ಲಿ ಎಲ್ಲ ಪುಡಾರಿಗಳೇ ಮುನ್ನೆಲೆಗೆ ಬಂದಿದ್ದಾರೆ. ಹೀಗಾಗಿ ಇಂದಿನ ರಾಜಕಾರಣದಲ್ಲಿ ಸಾಹಿತಿಗಳಿಗೆ ಜಾಗವೇ ಇಲ್ಲದಂತಾಗಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಪುಂಡತನ, ಪುಡಾರಿತನ ಮುಂದೆ ಬಂದಾಗ ಗೌರವ ಇರುವ ವ್ಯಕ್ತಿಗಳಿಗೆ ಅಲ್ಲಿ ನಿಲ್ಲಲು ಸಾಧ್ಯವಿಲ್ಲ. ಇನ್ನು ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ ವ್ಯಕ್ತಿಗಳು ಇಂದಿನ ರಾಜಕೀಯದಲ್ಲಿ ನಿಲ್ಲಲು ಆಗುತ್ತಿಲ್ಲ. ರಾಜಕಾರಣ ಇಂದು ನಾವೆಲ್ಲ ನಾಚಿಕೆ ಪಡುವ ಸ್ಥಿತಿ ಬಂದಿದೆ ಎಂದು ಹೇಳಿದರು.
ಸೈದ್ಧಾಂತಿಕ ರಾಜಕಾರಣ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ತಾವು ಅಲಂಕರಿಸಿದ ಯಾವುದೇ ಹುದ್ದೆಗಳಿಗೆ ಗೌರವ ತರುವಂತಹ ಭಾಷೆಯನ್ನ ರಾಜಕಾರಣಿಗಳು ಬಳಸುತ್ತಿಲ್ಲ. ದೆಹಲಿಯಿಂದ ಹಿಡಿದು ಬೆಂಗಳೂರವರೆಗೂ ಯಾರೂ ತಮ್ಮ ಹುದ್ದೆಗೆ ತಕ್ಕಂತೆ ಮಾತನಾಡುತ್ತಿಲ್ಲ, ಹೀಗಾಗಿ ನಮ್ಮಂಥಹ ಮರ್ಯಾದಸ್ಥರು ಒಂದಷ್ಟು ಕಾಲ ರಾಜಕಾರಣದಿಂದ ಹಿಂದೆ ಸರಿದಿದ್ದೇವೆ ಎಂದು ಬರಗೂರು ಹೇಳಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಪ್ರಬುದ್ಧವಾಗಿ ಇಲ್ಲ. ವ್ಯಕ್ತಿ ಕೇಂದ್ರೀತವಾದ ಭಾಷೆ ಬಳಸುವ ಹೃದಯಹೀನ ಜನ ಆಡಳಿತ ಮಾಡಲು ಹೋದಾಗ ಈ ರೀತಿ ಆಗುತ್ತದೆ ಎಂದು ಹರಿಹಾಯ್ದರು.