ಬೆಂಗಳೂರು: ರಾಜ್ಯಾದ್ಯಂತ ಗೌರಿ- ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗಳಲ್ಲಿ ಭಾನುವಾರ ಗಣಪತಿ ಮೂರ್ತಿ, ಹೂ-ಹಣ್ಣಿನ ಖರೀದಿ ಜೋರಾಗಿದ್ದು, ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಗಣೇಶ ಮೂರ್ತಿ ವಿಸರ್ಜನೆಗಾಗಿ ಬಿಬಿಎಂಪಿ ವತಿಯಿಂದ ನಗರದ ಹಲವು ಕೆರೆಗಳಲ್ಲಿ ಕಲ್ಯಾಣಿ ವ್ಯವಸ್ಥೆ ಮಾಡಲಾಗಿದೆ. ಸ್ಯಾಂಕಿ ಕೆರೆ, ಹಲಸೂರು ಕೆರೆ ಮತ್ತು ಯಡಿಯೂರು ಕೆರೆ ಸೇರಿದಂತೆ ಹಲವೆಡೆ ವ್ಯವಸ್ಥೆ ಮಾಡಲಾಗಿದೆ. 1 ಲಕ್ಷ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶವಿದ್ದು, ದೊಡ್ಡ ಗಣಪತಿ ವಿಸರ್ಜನೆಗೆ ಕ್ರೇನ್ ಬಳಸಲು ಸೂಚಿಸಲಾಗಿದೆ. ಪಿಓಪಿ(ಪ್ಲಾಸ್ಟರ್ ಆಫ್ ಪ್ಯಾರೀಸ್) ಗಣೇಶ ಬಂದ್ರೂ ವಿಸರ್ಜನೆಗೆ ಅವಕಾಶ ಮಾತ್ರ ಇಲ್ಲ. ಎಲ್ಲಾ ಕಡೆ ಸಿಸಿಟಿವಿ ಅಳವಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ.
ಇತ್ತ ವಿಘ್ನ ವಿನಾಶಕನ ಪೂಜೆಗಾಗಿ ಬೆಂಗಳೂರಿನ ಜನರು ಸಜ್ಜಾಗಿದ್ದಾರೆ. ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರಂ ಮಾರುಕಟ್ಟೆಗಳಲ್ಲಿ ಜನ ಸೇರಿದ್ದು, ಹೂ ಹಾಗೂ ಹಣ್ಣುಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದರು. ಹಬ್ಬದ ಕಾರಣಕ್ಕೆ ಅಗತ್ಯವಸ್ತುಗಳ ದರವೂ ದುಪ್ಪಟ್ಟಾಗಿತ್ತು.
ಮಲ್ಲಿಗೆ ಮಾರು ಹಿಂದಿನ ದರ 130ರೂ. ಇದ್ದು, ಈಗ 230 ರೂ. ಆಗಿದೆ. ಚೆಂಡೂ ಹೂ ಮಾರು 80ರೂ. ಇದ್ದು, ಈಗ 200 ರೂ. ಹೆಚ್ಚಾಗಿದೆ. ಗುಲಾಬಿ ಕೆಜಿಗೆ 120ರೂ. ಇತ್ತು. ಆದರೆ ಈಗ 200 ರೂ. ಆಗಿದೆ. ಎಕ್ಕದ ಹೂವಿನ ಹಾರ 20 ರೂ. ಹಾಗೂ ಗರಿಕೆ ಕಟ್ಟು 20 ರೂ. ಆಗಿದೆ. ಇತ್ತ ಹಣ್ಣುಗಳಲ್ಲಿ ಸೇಬು 180ರೂ. ಇತ್ತು. ಆದರೆ ಈಗ 200 ರೂ. ಆಗಿದೆ. ದಾಳಿಂಬೆ 120ರೂ. ಇದ್ದು, 180 ಆಗಿದೆ.
ವರಮಹಾಲಕ್ಷ್ಮೀ ಹಬ್ಬದ ದರಕ್ಕಿಂತ ಗಣೇಶ ಹಬ್ಬದಲ್ಲಿ ಬೆಲೆ ಕಡಿಮೆ ಇದೆ ಎಂದು ವ್ಯಪಾರಿಗಳು ಹೇಳುತ್ತಿದ್ದಾರೆ.