ಬೆಂಗಳೂರು: ನನ್ನ ಇಲಾಖೆಯಲ್ಲಿ ಬೇರೆ ಯಾರ ಹಸ್ತಕ್ಷೇಪವೂ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G. Parameshwara) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಟಿ ರವಿ ಮಾತನಾಡಿದ ವಿಡಿಯೋ ನಕಲಿ (Fake Video) ಎಂದು ಸಭಾಪತಿ ಹೇಳಿದ್ದರೂ ಅದನ್ನು ಪರಿಶೀಲನೆ ನಡೆಸಬೇಕು. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(FSL) ಕಳುಹಿಸಿ ಪರಿಶೀಲನೆ ನಡೆಸುತ್ತೇವೆ. ಮಹಜರು ನಡೆಸಲು ಅನುಮತಿ ನೀಡುವಂತೆ ಪೊಲೀಸರು ಕೇಳಿದ್ದಾರೆ. ಸಭಾಪತಿಗಳು ಅನುಮತಿ ನೀಡದೇ ಸದನದ ಮಹಜರು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ತಿಳಿಸಿದರು.
ಗೃಹ ಸಚಿವರು ಇದ್ದಾರಾ ಇಲ್ವಾ ಅಂತ ಕುಮಾರಸ್ವಾಮಿ ಅವರೇ ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆಯೋ? ಇಲ್ವೋ ಎಂಬುದು ಅವರಿಗೆ ಗೊತ್ತಿದೆ. ಯಾವ ರೀತಿಯಲ್ಲಿ ಗೃಹ ಸಚಿವರು ಇಲ್ಲ ಎಂದು ಅವರೆ ಹೇಳಬೇಕು. ಯಾರೂ ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಧಿಕಾರಿಗಳು ಏನು ಮಾಡಬೇಕು ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಕೆಲವು ಸರಿ ಅಧಿಕಾರಿಗಳಿಂದ ತಪ್ಪು ಆಗುತ್ತದೆ ಮತ್ತೆ ಕೆಲವು ಸರಿ ಅಧಿಕಾರಿಗಳು ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ನಾವೇ ಹೇಳುತ್ತೇವೆ. ಯಾರು ನಿರ್ದೇಶನ ಕೊಟ್ಟಿದ್ದರು ಅಂತ ನೇರವಾಗಿ ಹೇಳಿದರೆ ನಾವೇ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.
ಒಂದು ಕಡೆ ಸದನಲ್ಲಿ ಆಗಿದ್ದು ಮತ್ತೊಂದು ಕಡೆ ಕಾನೂನಿನ ವಿಚಾರ. ಅಲ್ಲಿ ಗಲಾಟೆ ಮಾಡಿದವರನ್ನು ಅರೆಸ್ಟ್ ಮಾಡಿದ್ದಾರೆ. ಅವರನ್ನ ಬಿಟ್ಟು ಏನು ಬೇಕಾದರೂ ಮಾಡಿಕೊಳ್ಳಲಿ ಅಂತ ಬಿಟ್ಟಿಲ್ಲ. ಬಿಜೆಪಿಯ ಒಬ್ಬೊಬ್ಬರ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ. ಈ ಬೆಳವಣಿಗೆಯಲ್ಲಿ ಎನ್ಕೌಂಟರ್ ಮಾಡುವ ವಿಚಾರವೇ ಇಲ್ಲ. ನನ್ನ ಪರಿಮಿತಿಯಲ್ಲಿ ಅಂತಹ ಎನ್ ಕೌಂಟರ್ ಯಾವುದು ಇಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಎರಡು ಮಾತು ಜೋರಾಗಿ ಆಡಿರಬಹುದು. ಆದರೆ ಅವರ ಕೈವಾಡ ಇದೆ ಎನ್ನುವುದು ನೀವು ಅವರನ್ನೇ ಕೇಳಿ. ಅವರ ಹೇಳಿಕೆಗೆ ನನ್ನ ಸಮರ್ಥನೆ ಕೇಳಿದರೆ ಸಿಗಲ್ಲ. ನಮ್ಮ ಇಲಾಖೆಯಲ್ಲಿ ಯಾರು ಹಸ್ತಕ್ಷೇಪ ಮಾಡಿಲ್ಲ ಎಂದರು.