ಬೆಂಗಳೂರು: ಮಹದಾಯಿಗಾಗಿ ಗುರುವಾರ ಕರೆ ನೀಡಿದ್ದ ಬಂದ್ ವಿಚಾರದಲ್ಲಿ ಕನ್ನಡ ಸಂಘಟನೆಗಳ ಭಿನ್ನಮತ ಶಮನ ಆಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಕನ್ನಡ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ನಡುವೆ ಬಂದ್ ವಿಚಾರವಾಗಿ ಮುನಿಸು ಏರ್ಪಟ್ಟಿದೆ ಎನ್ನಲಾಗಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರವೀಣ್ ಶೆಟ್ಟಿ ಅವರು, ಜನವರಿ 25 ರ ಬಂದ್ಗೆ ಬೆಂಬಲ ಕೊಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಂದು ಬಂದ್ ಮಾಡುವ ಬದಲು ಹೋರಾಟ ಮಾಡೋಣ ಎನ್ನುವುದು ನಮ್ಮ ಕರವೇ ಕಾರ್ಯಕರ್ತ ಅಭಿಪ್ರಾಯ ಎಂದರು.
ಮಹದಾಯಿ ವಿಚಾರವಾಗಿ ಅನಿವಾರ್ಯವಾಗಿ ಬಂದ್ ಮಾಡೋಣ, ಆದರೆ ಈಗ ಜನರಲ್ಲಿ ಬಂದ್ ಅಗತ್ಯದ ಪ್ರಶ್ನೆ ಮೂಡಿದೆ. ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್ ಮಾಡುವ ನಿರ್ಧಾರಕ್ಕೆ ನಾವು ಬೆಂಬಲ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಪದೇ ಪದೇ ಬಂದ್ ನಡೆಸುವುದು ಸರಿಯಾಗುವುದಿಲ್ಲ, ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಆದರೆ ಫೆಬ್ರವರಿ ನಾಲ್ಕರಂದು ಬಂದ್ ಗೆ ಕರೆ ನೀಡಿದ್ದು ಯಾಕೆ ಎಂಬುದನ್ನು ಅವರ ಬಳಿಯೇ ಕೇಳಬೇಕು ಎಂದು ಪ್ರಶ್ನಿಸುವ ಮೂಲಕ ವಾಟಾಳ್ ನಾಗರಾಜ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಕನ್ನಡ ಸಂಘಟನೆಗಳಿಗೆ ಒಂದು ಪ್ರಾದೇಶಿಕ ಪಕ್ಷದ ಚಿಂತನೆ ಬೇಕಾಗಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ಜೊತೆ ಕೈ ಜೋಡಿಸುವುದು ಅಥವಾ ಒಂದೇ ಪಕ್ಷಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸಂಘಟನೆ ಅಂದರೆ ಎಲ್ಲಾ ಹೋರಾಟಗಳಲ್ಲಿ ಒಟ್ಟಿಗೆ ಹೋಗಬೇಕು. ಆದರೆ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯದಿಂದ ಈ ವಿಚಾರದಿಂದ ಕೊಂಚ ಹೊರ ಉಳಿದಿದ್ದೇನೆ ಎಂದರು.