ಬೆಂಗಳೂರು: ತಮಿಳುನಾಡಿನ ವೆಲಂಕಣಿಯಲ್ಲಿ ಮೂವರು ಕುಖ್ಯಾತ ಕಳ್ಳರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜಯಪ್ರಕಾಶ್ ಅಲಿಯಾಸ್ ಜೆ.ಪಿ, ಸುಜಯ್, ಅಲೆಕ್ಸ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 40 ಲಕ್ಷ ಮೌಲ್ಯದ ಆರು ವಾಹನ ಹಾಗೂ 50 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಕಳ್ಳರನ್ನು ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದಾಗ ಮತ್ತೊಂದು ಕಳ್ಳತನ ಕೃತ್ಯ ಎಸಗಿರೋ ಬಗ್ಗೆ ಬಯಲಾಗಿದೆ. ತಮಿಳುನಾಡಿನ ವೆಲಂಕಣಿ ಚರ್ಚ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮತ್ತು ಚಿನ್ನಾಭರಣ ಕಳವು ಮಾಡಿರೋ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಚರ್ಚ್ ನಲ್ಲಿ ಕಳ್ಳತನ ಮಾಡಿದ್ದ ಅಮೆರಿಕ ಕರೆನ್ಸಿ ಮತ್ತು ಚಿನ್ನಾಭರಣಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಜೈಲಿನಲ್ಲಿ ಪರಿಚಯವಾಗಿ ಕಳ್ಳತನ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ವಿಲ್ಸನ್ ಗಾರ್ಡನ್, ಚಾಮರಾಜಪೇಟೆ, ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇರಳದ ಅರ್ಥಾಕುಲಂ, ಎಡಪಳ್ಳಿ ಮತ್ತು ತ್ರಿಶೂರ್ ಚರ್ಚ್ ಗಳಲ್ಲಿ ಕೂಡ ಆರೋಪಿಗಳು ತಮ್ಮ ಕೈಚಳಕ ತೋರಿಸಿದ್ದರು.