ತುಮಕೂರು: ಕುರಿ ಕದಿಯಲು ಬಂದ ಕಳ್ಳನನ್ನು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡಮಾಲೂರಿನಲ್ಲಿ ನಡೆದಿದೆ.
ಮೃತ ಕಳ್ಳ ಆಂಧ್ರ ಮೂಲದವನು ಎನ್ನಲಾಗಿದೆ. ರಾತ್ರಿ ಮೂವರು ಕಳ್ಳರು ಸೇರಿ ದೊಡ್ಡಮಾಲೂರಿನ ರಾಮರೆಡ್ಡಿ ಎಂಬವರ ಮನೆಯಲ್ಲಿ ಕುರಿ ಕದಿಯಲು ಬಂದಿದ್ದಾರೆ. ಕಳ್ಳತನಕ್ಕೆ ಯತ್ನಿಸುವಾಗ ಮಾಲೀಕ ರಾಮರೆಡ್ಡಿ ಎಚ್ಚರಗೊಂಡಿದ್ದಾರೆ. ಈ ವೇಳೆ ಮಾಲೀಕ ಕಳ್ಳರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಆದ್ರೆ ಇಬ್ಬರು ಕಳ್ಳರು ತಪ್ಪಿಸಿಕೊಂಡು ಪರಾರಿಯಾಗಿದ್ದು, ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದಾನೆ. ಕೈಗೆ ಸಿಕ್ಕ ಕಳ್ಳನನ್ನು ರಾಮರೆಡ್ಡಿ ಹಾಗೂ ಕುಟುಂಬದ ಸದಸ್ಯರು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಮನಬದಂತೆ ಥಳಿಸಿದ್ದಾರೆ. ತೀವ್ರ ಥಳಿತಕ್ಕೊಳಗಾದ ಕಳ್ಳ ಕಟ್ಟಿದ ಕಂಬದಲ್ಲೇ ಸಾವನ್ನಪ್ಪಿದ್ದಾನೆ.
ಕೊಡಿಗೆನಹಳ್ಳಿ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ರಾಮರೆಡ್ಡಿ ಸೇರಿದಂತೆ ಕುಟುಂಬ ಸದಸ್ಯರಾದ ಉಮೇಶ್, ನಾಗರಾಜು ಮತ್ತು ಬಾಬು ಎಂಬವರನ್ನು ವಶಕ್ಕೆ ಪಡೆದಿದ್ದಾರೆ.