ಬೆಂಗಳೂರು: ದಂಡುಪಾಳ್ಯದ ಮೀಸೆ ಚಿಗುರದ ಯುವಕ ಅಜಿತ್ ಅ್ಯಂಡ್ ಆತನ ಗ್ಯಾಂಗ್ ಅನ್ನು ಕೆ. ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಅಮಲಿನಲ್ಲಿ ಹಣಕ್ಕಾಗಿ ರಾಜಧಾನಿಗೆ ಬಂದಿದ್ದ ಅಜಿತ್, ತನ್ನಂತಯೇ ಗಾಂಜಾ ಸೇವನೆ ಮಾಡುವ ಹುಡುಗರನ್ನು ಸೇರಿಸಿ ಗ್ಯಾಂಗ್ ಕಟ್ಟಿಕೊಂಡಿದ್ದನು. ದೊಣ್ಣೆ ಹಿಡಿದು ಸರಗಳ್ಳತನಕ್ಕೆ ಹೊರಡುತ್ತಿದ್ದ ಗ್ಯಾಂಗ್ ಸರಗಳ್ಳತನದ ವೇಳೆ ಸ್ವಲ್ಪ ಯಾಮಾರಿದ್ರೂ ತಲೆಗೆ ದೊಣ್ಣೆ ಏಟು ಬೀಳುತ್ತಿತ್ತು. ಈ ಗ್ಯಾಂಗ್ ಒಂದು ಚಿನ್ನದ ಸರಕ್ಕಾಗಿ ಕೊಲೆ ಮಾಡಲು ಹಿಂಜರಿಯುತ್ತಿರಲಿಲ್ಲ.
ಡಿಸೆಂಬರ್ 12ರಂದು ಸರಣಿ ಸರಗಳ್ಳತನ ಮಾಡಿದ್ದ ಈ ಗ್ಯಾಂಗ್ ಕೆ.ಆರ್ ಪುರಂ, ರಾಮಮೂರ್ತಿನಗರ, ಅವಲಹಳ್ಳಿ ಸೇರಿದಂತೆ ಒಂದೇ ದಿನ ಎಂಟು ಕಡೆ ಚೈನ್ ಸ್ನಾಚಿಂಗ್ ಮಾಡಿದ್ದರು. ಕಿತ್ತಗನೂರಿನ ಬಳಿ ಲೀಲಾವತಿ ಎಂಬುವರ ತಲೆಗೆ ದೊಣ್ಣೆಯಿಂದ ಹೊಡೆದು ಸರ ಕಸಿದು ಎಸ್ಕೇಪ್ ಆಗಿದ್ದರು. ಇಬ್ಬರು ಮೊಮ್ಮಕ್ಕಳ ಜೊತೆ ಬರುತ್ತಿದ್ದ ಮಹಿಳೆಗೆ ದೊಣ್ಣೆಯಿಂದ ಹೊಡೆದು ಸರ ಕಿತ್ತಿದ್ದರು. ಕಡೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಆರ್ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ದಂಡುಪಾಳ್ಯದ 17 ವರ್ಷದ ಅಜಿತ್ ಈ ಖತರ್ನಾಕ್ ಗ್ಯಾಂಗ್ ಲೀಡರ್ ಆಗಿದ್ದು, ಚಿಕ್ಕ ವಯಸ್ಸಿಗೆ ಗಾಂಜಾ ಪೆಡ್ಲರ್ ಆಗಿದ್ದನು. ಹಣಕ್ಕಾಗಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ ಅಜಿತ್, ಕೊನೆಗೆ ಒಂದು ಗ್ಯಾಂಗ್ ಕಟ್ಟಿದ್ದನು. ಆ ಗ್ಯಾಂಗ್ನಲ್ಲಿ ಇದ್ದವರು ಆತನಿಗಿಂದ ಚಿಕ್ಕ ವಯಸ್ಸಿನ ಗಾಂಜಾ ವ್ಯಸನಿಗಳು. ಸರಗಳ್ಳತನಕ್ಕೆ ರಸ್ತೆ ಬದಿ ನಿಲ್ಲಿಸಿದ್ದ ಬೌನ್ಸ್ ಬೈಕ್ಗಳನ್ನೇ ಕದಿಯುತ್ತಿದ್ದನು. ಬೈಕಿಗೆ ಡೈರೆಕ್ಟ್ ವೈರ್ ಕನೆಕ್ಟ್ ಮಾಡುವ ಉಪಾಯ ತಿಳಿದಿದ್ದ ಅಜಿತ್, ಅದನ್ನು ಸ್ನೇಹಿತರಿಗೆ ಹೇಳಿಕೊಟ್ಟಿದ್ದನು. ನೇರವಾಗಿ ವೈರ್ ಕನೆಕ್ಟ್ ಮಾಡಿ ಸರಗಳ್ಳತನಕ್ಕೆ ಬೌನ್ಸ್ ಬೈಕ್ ಬಳಸುತ್ತಿದ್ದನು.
ಕದ್ದ ಸರವನ್ನು ಅಜಿತ್ ಹಾಗೂ ಆತನ ಗ್ಯಾಂಗ್ ಮಾರ್ವಾಡಿಗಳಿಗೂ ಕೊಡುತ್ತಿರಲಿಲ್ಲ. ಹಳ್ಳಿಗಳ ಕಡೆ ಹೋಗಿ ಮನೆಯಲ್ಲಿ ತಾಯಿಗೆ ಆರೋಗ್ಯದ ಸಮಸ್ಯೆ ಎಂದು ಮಾರಿ, ಬಂದ ಹಣದಲ್ಲಿ ಎಂಜಾಯ್ ಮಾಡುತ್ತಿದ್ದರು. ಸರಕ್ಕೆ ಕೈ ಹಾಕಿzದರೆ ಅದನ್ನು ತೆಗೆದುಕೊಂಡೇ ಬರಬೇಕು. ಪ್ರತಿರೋಧ ಮಾಡಿದರೆ ಮನಬಂದಂತೆ ಹಲ್ಲೆ ಮಾಡಿ ಕಿತ್ತುಕೊಂಡು ಬರಬೇಕು ಎಂದು ಅಜಿತ್ ಉಪದೇಶ ಮಾಡುತ್ತಿದ್ದನು. ಸದ್ಯ ಅಜಿತ್ ಸೇರಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.