ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಣದ ದುರುಪಯೋಗ ಕುರಿತಂತೆ ಸರಣಿಯವಾಗಿ ಪಬ್ಲಿಕ್ ಟಿವಿ ಡಿಜಿಟಲ್ ವರದಿಯನ್ನು ಮಾಡಿತ್ತು. ಈ ಕುರಿತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಗಮನ ಸೆಳೆದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ.ಮಾ. ಹರೀಶ್ ಅವರಿಗೆ ಮನವಿ ಪತ್ರವೊಂದನ್ನು ನೀಡಿದ್ದರು. ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದರು. ತನಿಖೆಗೆ ಒತ್ತಾಯ ತೀವ್ರವಾಗುತ್ತಿದ್ದಂತೆಯೇ ವಾಣಿಜ್ಯ ಮಂಡಳಿಯಲ್ಲಿ ಕಡತಗಳು ಮಿಸ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ತನಿಖೆಗಾಗಿ ಆಗ್ರಹಿಸುತ್ತಿದ್ದಂತೆಯೇ, ಪದಾಧಿಕಾರಿಗಳ ಮೀಟಿಂಗ್ ಕರೆದು, ಅವರೊಂದಿಗೆ ಚರ್ಚಿಸುವುದಾಗಿ ಭಾ.ಮಾ ಹರೀಶ್ ಅವರು ತಿಳಿಸಿದ್ದರು. ಆದರೆ, ಮೀಟಿಂಗೆಗೆ ಬೇಕಾದ ಕಡತಗಳೆ ಕಾಣೆಯಾಗಿವೆಯಂತೆ. ಹಾಗಾಗಿ ಕಳೆದು ಹೋಗಿರುವ ಕಡತಗಳ ಬಗ್ಗೆ ತನಿಖೆ ನಡೆಸುವಂತೆ ಭಾ.ಮಾ.ಹರೀಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚುನಾವಣೆ ನಡೆಯುವುದಕ್ಕೂ ಮುನ್ನ ಹಲವು ವರ್ಷಗಳಿಂದ ಇದ್ದ ದಾಖಲಾತಿಗಳು ಮಿಸ್ ಆಗಿವೆ. ಯಾರೋ ಅವುಗಳನ್ನು ಹೊರಗೆ ತಗೆದುಕೊಂಡು ಹೋಗಿದ್ದಾರೆ ಎಂದು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ
ಅಧ್ಯಕ್ಷರು ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು, ಎನ್.ಸಿ.ಆರ್ ಹಾಕಿದ್ದಾರೆ. ಈ ಕಡತಗಳು ಚುನಾವಣೆಗೂ ಮುನ್ನ ಕಾಣೆಯಾಗಿದ್ದರಿಂದ ಹೊಸ ಪದಾಧಿಕಾರಿಗಳಿಗೆ ಅದಕ್ಕೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ, ಯಾರು ಅವುಗಳನ್ನು ಹೊರಗೆ ತಗೆದುಕೊಂಡು ಹೋಗಿದ್ದು? ಅದರ ಹಿಂದಿರುವ ಉದ್ದೇಶವೇನು ಎನ್ನುವುದನ್ನು ತನಿಖೆಯಿಂದಲೇ ತಿಳಿದುಕೊಳ್ಳಬೇಕಿದೆ. ಕಡತಗಳು ಕಾಣೆಯಾಗುತ್ತವೆ ಅಂದರೆ, ಹಣಕಾಸಿನ ವ್ಯವಹಾರದ ಸತ್ಯಾಸತ್ಯತೆ ಬಯಲಿಗೆ ಬರುತ್ತಾ ಅನ್ನುವ ಪ್ರಶ್ನೆ ಎದುರಾಗಿದೆ.