ಬೆಂಗಳೂರು: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆಯವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನ ನಡೆದಿದೆ.
ಪ್ರಶಾಂತ್ ದೇಶಪಾಂಡೆಯವರು ವಾಸವಿರುವ ಸದಾಶಿವನಗರದ 10ನೇ ಮುಖ್ಯ ರಸ್ತೆಯಲ್ಲಿಯ ಬಾಡಿಗೆ ಮನೆಯಲ್ಲಿನ ಓದುವ ಕೊಠಡಿಯಲ್ಲಿಟ್ಟಿದ್ದ ಲ್ಯಾಪ್ಟಾಪ್, ಸುಮಾರು ಅರ್ಧ ಕೆಜಿ ತೂಕದ ದೇವರ ಬೆಳ್ಳಿಯ ವಿಗ್ರಹ, ಎರಡು ಮೊಬೈಲ್ ಫೋನ್ಗಳನ್ನು ಕಳವು ಮಾಡಲಾಗಿದೆ. ಎರಡು ಲಕ್ಷ ರೂ.ಮೌಲ್ಯದ ದೇವಿಯ ಬೆಳ್ಳಿಯ ಮುಖವಾಡವನ್ನು ಕದ್ದೊಯ್ಯಲಾಗಿದೆ.
ಮನೆಯ ಹಿಂಭಾಗ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಲ್ಲಿಂದ ಮನೆಯ ಕಾಂಪೌಂಡ್ ಒಳಗೆ ಬಂದರೆ ಕೇವಲ ಎರಡು ಅಡಿ ದೂರಕ್ಕೆ ಅಡುಗೆ ಮನೆಗೆ ಪ್ರವೇಶಿಸಬಹುದು. ಬಹುಶಃ ರಾತ್ರಿ ಹಿಂಬಾಗಿಲು ಲಾಕ್ ಮಾಡದೆ ಇರುವ ಕಾರಣ ಕಳ್ಳರು ಮನೆಯೊಳಗೆ ಪ್ರವೇಶಿಸರಬಹುದು ಎಂದು ಪ್ರಶಾಂತ್ ತಿಳಿಸಿದ್ದಾರೆ.
ಮನೆಯಲ್ಲಿ ಎಲ್ಲರೂ ಇರುವಾಗಲೇ ಕಳ್ಳತನವಾಗಿದೆ. ಮೂರು ನಾಯಿಗಳನ್ನು ಸಾಕಲಾಗಿದೆ. ಭದ್ರತೆಗಾಗಿ ಓರ್ವ ಸೆಕ್ಯುರಿಟಿ ಗಾರ್ಡ್ ಕೂಡ ಇದ್ದಾರೆ. ಆದರೆ, ಹಿಂಭಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಿರಿದಾದ ಜಾಗವಿದ್ದ ಕಾರಣ ಕಳ್ಳರ ಪ್ರವೇಶದ ಸುಳಿವು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಶಾಂತ ದೇಶಪಾಂಡೆ ಮನೆ ರಸ್ತೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.