ಮುಂದಿನ ವಿಧಾನಸಭಾ ಎಲೆಕ್ಷನ್‍ಗೆ ನಿಲ್ತೀನಿ: ಸಿಎಂ ಘೋಷಣೆ

Public TV
1 Min Read
cm siddaramaiah

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಉಪ ಚುನಾವಣೆ ಗೆಲುವಿನ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೊದಲು ನಾನೇ ಚುನಾವಣೆಗೆ ನಿಲ್ಲೋಲ್ಲ ಅಂತ ಹೇಳಿದ್ದೆ. ಆದ್ರೆ ಬಿಜೆಪಿಯವರ ಈ ಆಟಗಳನ್ನ ನೋಡಿ ಚುನಾವಣೆಗೆ ನಿಲ್ಲಲು ನಿರ್ಧಾರ ಮಾಡಿದ್ದೇನೆ. ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎನ್ನುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ನೋಡಿ ಜನ ಮತ ಹಾಕಿದ್ದಾರೆ. ಜಯಕ್ಕೆ ಕಾರಣರಾದವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಬಿಜೆಪಿಯವರು ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡದೇ ವೈಯಕ್ತಿಕ ಟೀಕೆ, ಅಸಂವಿಧಾನಿಕ ಪದ ಬಳ, ಒಣ ಜಂಬದ ಮಾತು ಆಡಿದ್ರು. ಆದ್ರೆ ನಾವು ನಮ್ಮ ಅಭಿವೃದ್ಧಿ ಕೆಲಸ ಜನರ ಮುಂದಿಟ್ಟು ಚುನಾವಣೆ ಗೆದ್ದಿದ್ದೇವೆ. ಈ ಚುನಾವಣೆಯಿಂದ ಜನರ ನಾಡಿ ಮಿಡಿತ ನಮಗೆ ಅರ್ಥವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೂ ನಾವು ನಮ್ಮ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರು ಮುಂದೆ ಹೋಗಿ ಚುನಾವಣೆ ಗೆಲ್ತೀವಿ ಅಂದ್ರು.

ಉತ್ತರ ಪ್ರದೇಶದದಂತೆ ಮೋದಿ ಅಲೆ ಇಲ್ಲಿ ಇಲ್ಲ. ಬಿಜೆಪಿಯ ಮಿಷನ್ 150 ಕರ್ನಾಟಕದಲ್ಲಿ ಸಾಧ್ಯವಿಲ್ಲ ಎಂದರು. ಶ್ರೀನಿವಾಸ್ ಪ್ರಸಾದ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಜನರೇ ಅವರಿಗೆ ತಕ್ಕಪಾಠ ಕಲಿಸಿದ್ದಾರೆ ಅಂತ ಟಾಂಗ್ ನೀಡಿದ್ರು.

ಇದೇ ವೇಳೆ ಚುನಾವಣೆಗೆ ಸಹಕಾರ ನೀಡಿದ ಹೈಕಮಾಂಡ್, ಪಕ್ಷದ ನಾಯಕರು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷರು, ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.

ಸಚಿವ ಸಂಪುಟ ಪುನರ್ ರಚನೆ ಮಾಡೊಲ್ಲ ಎರಡು ಖಾಲಿ ಸ್ಥಾನಗಳನ್ನ ತುಂಬುತ್ತೇವೆ. ನಾಳೆ ದೆಹಲಿಗೆ ಹೋಗಲಿದ್ದು, ಈ ಬಗ್ಗೆ ಹೈ ಕಮಾಂಡ್ ಜೊತೆ ಚರ್ಚಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತೆ ಅಂತ ತಿಳಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *