ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ದಾರಿಯಲ್ಲಿ ಸಿಕ್ಕ 12,900 ರೂ. ಹಣವನ್ನ ವಿದ್ಯಾರ್ಥಿಗಳು ಪೊಲೀಸರಿಗೆ (Koppa Police) ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.
ಕೊಪ್ಪ ತಾಲೂಕಿನ SVT ರಸ್ತೆಯ ಚಂದು ಆರ್ಟ್ಸ್ ಬಳಿ ಕಲ್ಕೆರೆ ಗ್ರಾಮದ ಜಯಂತ್ ಎಂಬವರು 12,900 ರೂಪಾಯಿ ಹಣವನ್ನ ಕಳೆದುಕೊಂಡಿದ್ದರು. ಕೊಪ್ಪಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಕಾಲೇಜು (Students) ಮುಗಿಸಿ ಮನೆಗೆ ಹೋಗುವಾಗ ಅದೇ ಹಣ ಅವರಿಗೆ ರಸ್ತೆಯಲ್ಲಿ ಸಿಕ್ಕಿತ್ತು. ಆ ಹಣವನ್ನ ವಿದ್ಯಾರ್ಥಿಗಳು ಶುಕ್ರವಾರ ಪೊಲೀಸರಿಗೆ ನೀಡಿ, ವಾರಸುದಾರರಿಗೆ ತಲುಪಿಸಲು ಮನವಿ ಮಾಡಿದ್ದರು. ಇದನ್ನೂ ಓದಿ: ಅಸ್ಸಾಂನಲ್ಲಿ ತರಕಾರಿ ಬೆಲೆ ಹೆಚ್ಚಳಕ್ಕೆ ಮಿಯಾ ಮುಸ್ಲಿಮರೇ ಕಾರಣ: ಹಿಮಂತ ಬಿಸ್ವಾ ಶರ್ಮಾ
ವಿದ್ಯಾರ್ಥಿಗಳು ಹಣ ನೀಡುತ್ತಿದ್ದಂತೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಣ ಕಳೆದುಕೊಂಡವರು ಸೂಕ್ತ ದಾಖಲೆಯೊಂದಿಗೆ ಬಂದು ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ, ಶನಿವಾರ ಹಣದ ಮೂಲ ವಾರಸುದಾರ ಜಯಂತ್ ಅವರು ಪೊಲೀಸ್ ಠಾಣೆಗೆ ಬಂದು ಹಣ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ 28 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ – ಈವರೆಗೆ 26% ಮಾತ್ರ ಬಿತ್ತನೆ
ಪೊಲೀಸರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಂದೀಪ್ ಮತ್ತು ಸ್ನೇಹಿತರನ್ನ ಕರೆಸಿ ಅವರ ಕೈನಿಂದಲೇ ಹಣವನ್ನ ಜಯಂತ್ ಅವರಿಗೆ ಕೊಡಿಸಿದ್ದಾರೆ. ರಸ್ತೆಯಲ್ಲಿ ಸಿಕ್ಕ ಹಣವನ್ನ ಪ್ರಾಮಾಣಿಕವಾಗಿ ಪೊಲೀಸ್ ಠಾಣೆಗೆ ತಲುಪಿಸಿದ ವಿದ್ಯಾರ್ಥಿಗಳಿಗೆ ಹಣದ ವಾರಸುದಾರ ಜಯಂತ್ ಅವರು ಬಹುಮಾನ ನೀಡಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರು ಕೂಡ ವಿದ್ಯಾರ್ಥಿಗಳ ಪ್ರಮಾಣಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.
Web Stories