ಗದಗ: ಸಿದ್ದರಾಮಯ್ಯ ಸಮಾವೇಶ ಸ್ಟೀರಾಯ್ಡ್ ಇದ್ದಂತೆ. ಸ್ಟೀರಾಯ್ಡ್ ಶಕ್ತಿ ಹೆಚ್ಚುಕಾಲ ಇರೋದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಶಕ್ತಿ 8 ತಿಂಗಳ ವರೆಗೆ ಇರೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಅವಕಾಶ ಕೊಟ್ಟರೇ ನಾವು ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುತ್ತೇವೆ: ಕೆ.ಪಿ.ನಂಜುಂಡಿ
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯದ ಬಗ್ಗೆ ನಾಡಿನ ಜನತೆಯನ್ನ ಬಡಿದೆಬ್ಬಿಸಿದ್ರೆ, ಇತ್ತ ಇನ್ನೊಬ್ಬರು ಹುಟ್ಟುಹಬ್ಬಕ್ಕೆ ಬಡಿದಾಡ್ತಿದ್ದಾರೆ. ರಾಹುಲ್ ಗಾಂಧಿ ಆಲಿಂಗನ ಮಾಡಿಸಿದ್ರಲ್ಲಾ ಇದೇನಾ ಒಗ್ಗಟ್ಟು? ಇದು ಎಷ್ಟರಮಟ್ಟಿಗೆ ಒಗ್ಗಟ್ಟಿದೆ ಎಂಬುದನ್ನು ತೋರಿಸಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ; ನಮ್ಮ ಮಕ್ಕಳು ಒಳ್ಳೆ ರಸ್ತೆಯಲ್ಲಿ ಓಡಾಡಬಾರದಾ – ಪ್ರಕಾಶ್ ರಾಜ್ ಪ್ರಶ್ನೆ
ಕಾಂಗ್ರೆಸ್ ಒಂದು ಸಮಾವೇಶ ಮಾಡಿ ಖುಷಿ ಪಟ್ಟಿರಬಹುದು. ಆದರೆ ಬಿಜೆಪಿಗೆ ಇಂತಹ ಸಮಾವೇಶ ಹೋರಾಟಗಳು ದಿನನಿತ್ಯ ಇರುತ್ತವೆ. ಯಾವುದೇ ಸಂಘಟನೆ, ಹುಟ್ಟುಹಬ್ಬಕ್ಕೆ ಬಿಜೆಪಿ ಹೆದರೋದಿಲ್ಲ. ಹುಟ್ಟುಹಬ್ಬ ನೋಡಿ ಜನ ಮತ ಹಾಕೋದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ಮಳೆಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಣಮಳೆ ರಾಜ್ಯವನ್ನು ಅಲ್ಲೋಲ-ಕಲ್ಲೋಲ ಮಾಡಿದೆ. ಅದರಲ್ಲೂ ಹಳೆ ಮೈಸೂರು, ಮಂಗಳೂರು ಭಾಗದಲ್ಲಿ ರಸ್ತೆಗಳು ಹಾಳಾಗಿವೆ. ರೈತರು ಬೆಳೆದ ಬೆಳೆ ನಷ್ಟವಾಗಿದೆ. ಹಾಗಾಗಿ ಸಿಎಂ ಕೋವಿಡ್ನಿಂದ ಬಳಲುತ್ತಿದ್ದರೂ ಅಧಿಕಾರಿಗಳೊಂದಿಗೆ ಚರ್ಚಿಸಿ 300 ಕೋಟಿ ರೂ. ಮಧ್ಯಂತರ ಬೆಳೆ ಪರಿಹಾರ ಘೋಷಣೆ ಮಾಡಿದ್ದಾರೆ. ಗದಗ ಜಿಲ್ಲೆಗೂ 5 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಹಾನಿಗೊಳಗಾದ ರೈತರಿಗೆ ತಾರತಮ್ಯ ಮಾಡದೇ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಹೇಳಿರುವುದಾಗಿ ಸಿಸಿ ಪಾಟೀಲ್ ತಿಳಿಸಿದ್ದಾರೆ.
ಈ ವೇಳೆ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ನಗರಾಭಿವೃದ್ಧಿ ಪ್ರಾಧಿಕಾರದ ಸಿದ್ದು ಪಲ್ಲೆದ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ರಾಜು ಕುರುಡಗಿ ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.