ಚಿಕ್ಕಮಗಳೂರು: ಕಾಫಿ ತೋಟಕ್ಕೆ ನುಗ್ಗಿದ ಹೆಬ್ಬಾವು ಕಾಡು ಕುರಿಯೊಂದನ್ನು ನುಂಗಿಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ನಡೆದಿದೆ.
ಮೂಡಿಗೆರೆ ತಾಲೂಕಿನ ಸಮೀಪದ ಕಾಫಿ ತೋಟವೊಂದರಲ್ಲಿ ಕಾಡುಕುರಿಯೊಂದನ್ನು ಅರ್ಧ ನುಂಗಿದ ಹೆಬ್ಬಾವು ಮುಂದೆ ತೆವಳಲಾಗದೇ, ಕಾಡಿಗೆ ಹೊಂದಿಕೊಂಡಿರುವ ತೋಟದ ಪಕ್ಕದಲ್ಲಿ ಬಿದ್ದುಕೊಂಡಿತ್ತು.
ತೋಟಗಳಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರು ಹೆಬ್ಬಾವನ್ನ ಕಂಡು ಕೂಗಾಡಿದ್ದಾರೆ. ಹಾವನ್ನ ಕಂಡ ತೋಟದ ಮಾಲೀಕ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಹಾಗೂ ಸ್ನೇಕ್ ಆರೀಫ್ ಮಲೆನಾಡಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಹೆಬ್ಬಾವನ್ನ ರಕ್ಷಿಸಿದ್ದಾರೆ. ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಆದರೆ ಹೆಬ್ಬಾವಿನ ಬಾಯಿಗೆ ಅರ್ಧಂಬರ್ಧ ತುತ್ತಾಗಿದ್ದ ಕಾಡು ಕುರಿ ಹಾವಿನ ಬಾಯಿಂದ ಹೊರಬರುವಷ್ಟರಲ್ಲೇ ಅಸುನೀಗಿದೆ.