– ಮತದಾರರ ತೀರ್ಪು ನಮ್ಮ ನಿರೀಕ್ಷೆಯನ್ನ ಹುಸಿಗೊಳಿಸಿದೆ
ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ದೇಶದ ಜನರು ಸ್ವಾಗತಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಮತ ಎಣಿಕೆಯ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಸಂಸದರು, ನನ್ನ ಗೆಲುವು ಖುಷಿ ತಂದಿದೆ. ನಿರಂತರವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದೇನೆ. ದೇಶದ ಅಭಿವೃದ್ಧಿಗಾಗಿ ಎಲ್ಲ ಸಹಕಾರವನ್ನು ನೀಡುತ್ತೇನೆ. ಅದರ ಜೊತೆಗೆ ವಿರೋಧ ಪಕ್ಷದಲ್ಲಿ ಕುಳಿತು ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿಯುವಂತಹ ಕೆಲಸವನ್ನ ನಾವು ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು ನಗರ ಪ್ರದೇಶದಲ್ಲಿ 14 ಲಕ್ಷ ಮತದಾರರಿದ್ದಾರೆ. ಅಲ್ಲಿನ ಮತದಾರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇದರಿಂದಾಗಿ ನಮಗೆ ಹಿನ್ನಡೆಯಾಗಿದೆ. ಮೈತ್ರಿಯಾಗಿದ್ದರಿಂದ ಲೀಡಿಂಗ್ ಕಡಿಮೆಯಾಯಿತು ಎಂದು ದೂರುವುದು ಸರಿಯಲ್ಲ. ಜನರು ಕೊಟ್ಟ ತೀರ್ಪನ್ನು ಸ್ವಾಗತಿಸ್ತೇವೆ. ಆದರೆ ನಮ್ಮ ನಿರೀಕ್ಷೆಗಿಂತ ಬೇರೆ ರೀತಿಯಲ್ಲಿಯೇ ಫಲಿತಾಂಶ ಬಂದಿದೆ ಎಂದ ಅವರು, ಮಂಡ್ಯದಲ್ಲಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಅವರಿಗೆ ಶುಭಕೋರಿದರು.
ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಸೋಲು ರಾಷ್ಟ್ರೀಯ ನಾಯಕರ ವೈಫಲ್ಯವಲ್ಲ. ಅದು ಬೇರೆ ರೀತಿ ಇದೆ, ಅಭಿವೃದ್ದಿಯ ಬಗ್ಗೆ ಅಲ್ಲ. ಅದರ ಬಗ್ಗೆ ನೀವೇ ವ್ಯಾಖ್ಯಾನ ಮಾಡಬೇಕು. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಮೇಲೆ ಚುನಾವಣೆಯ ಫಲಿತಾಂಶ ಬೀರಲ್ಲ. ಮುಂದಿನ ದಿನಗಳಲ್ಲಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ನಡೆಸಬೇಕಿದೆ ಎಂದರು.
ಕರ್ನಾಟಕದಲ್ಲಿ ಮಾತ್ರ ಅಲ್ಲ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈ ಕ್ಷೇತ್ರದಲ್ಲಿ ಮೈತ್ರಿ ಅಸಮಧಾನವಿಲ್ಲ. ಸರ್ಕಾರದ ಮೇಲೆ ಫಲಿತಾಂಶದಿಂದ ವ್ಯತಿರಿಕ್ತ ಪರಿಣಾಮ ಬೀರಲ್ಲ. ಬುದ್ಧಿವಂತಿಕೆಯಿಂದ ಮುಂದಿನ ದಿನಗಳಲ್ಲಿ ಜನರ ಭಾವನೆ ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ಕೆಲಸ ಮಾಡಬೇಕಿದೆ. ಅದನ್ನು ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.