ಚಿತ್ರದುರ್ಗ: ಪಂಚಮಸಾಲಿಗಳು ಒರಿಜಿನಲ್ ಲಿಂಗಾಯತರು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ, 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ, ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು
ಈ ಸಭೆಯಲ್ಲಿ ಮಾತನಾಡಿದ ಅವರು, ನಾಡಿಗೆ ಮೂವರು ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಜೆ.ಹೆಚ್.ಪಾಟೀಲ್, ವೀರೇಂದ್ರ ಪಾಟೀಲ್ ರನ್ನು ನೀಡಿದ ಸಮಾಜ ನಮ್ಮದು. ಅಂತಹ ಸಮಾಜ ಇನ್ನೂ ಹಿಂದೆಯೇ ಉಳಿದಿದೆ. ನಾವು ಮೀಸಲಾತಿಗಾಗಿ ಕ್ರಾಂತಿಯ ಕಿಡಿಗಳಾಗಬೇಕು. ಪಂಚಮಸಾಲಿ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಅಷ್ಟ್ಟು ಶಕ್ತಿಯುತವಾದ ಸಮಾಜ ನಮ್ಮದು ಎಂದರು.
ಪಂಚಮಸಾಲಿಗಳು ಒರಿಜಿನಲ್ ಲಿಂಗಾಯತರು, ನಮ್ಮ ಪಾದಯಾತ್ರೆಯ ಶಕ್ತಿ ಅತ್ಯುತ್ತಮವಾಗಿತ್ತು. ಸಾವಿರಾರು ವರ್ಷಗಳ ಇತಿಹಾಸದ ನಮ್ಮ ಸಮಾಜಕ್ಕೆ 2ಎ ಮೀಸಲಾತಿಬೇಕು. ಮತ್ತೆ ಹೋರಾಟ ಸತ್ಯಾಗ್ರಹ ಮಾಡೋಣ, ಬೃಹತ್ ರಾಜ್ಯ ಅಭಿಯಾನದಲ್ಲಿ ಸಿದ್ದರಾಗಿ ಎಂದು ಪಂಚಮಸಾಲಿಗಳಿಗೆ ಕರೆ ಕೊಟ್ಟರು. ಇದೇ ವೇಳೆ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವಲ್ಲಿ ಕೆಲವು ಲಿಂಗಾಯತ ಮಠಾಧೀಶರು ಮತ್ತು ಕೆಲವು ರಾಜಕಾರಣಿಗಳು ಹಿನ್ನಡೆ ಮಾಡುತ್ತಿದ್ದಾರೆ. ಆದರೆ 2ಎ ಮೀಸಲಾತಿಗಾಗಿ ಮತ್ತೆ ಬೃಹತ್ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ವರದಿ ಬೆನ್ನಲ್ಲೇ ಐವರ ಬಂಧನ, ಬಿಡುಗಡೆ
ಲಿಂಗಾಯತ ಪಂಚಮಸಾಲಿ ಮೀಸಲಾತಿ ಬೇಡಿಕೆಗಾಗಿ ಮತ್ತೆ ಹೋರಾಟ ನಡೆಸಬೇಕಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಆದೇಶದಂತೆ, ಪಂಚಮಸಾಲಿ ಸಮುದಾಯದವರು ಸಿದ್ದರಾಗಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮಗೆ ಮೀಸಲಾತಿ ಕೊಟ್ಟೇ ಕೊಡುತ್ತಾರೆ. ಈ ವೇಳೆ ಪಂಚಸೇನೆ ರಾಜ್ಯಾಧ್ಯಕ್ಷ ಬಿ.ಎಸ್.ಪಾಟೀಲ್ ಮಾತನಾಡಿ, ನಮ್ಮ ಹೋರಾಟ ಯಾರನ್ನೋ ಮಂತ್ರಿ, ಶಾಸಕರನ್ನು ಮಾಡಲು ಅಲ್ಲ. ನಮ್ಮ ಸಮಾಜದ ಬಡ ಮಕ್ಕಳಿಗೆ, ಬಡ ಜನರಿಗಾಗಿ, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾತಿ ಅಗತ್ಯ, ಅದಕ್ಕಾಗಿ ಎಲ್ಲರೂ ಒಂದಾಗಿ ಬನ್ನಿ ಎಂದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ, ಗೌಡ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗೇ ಗೌಡ ಪಾಟೀಲ್, ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜ್ಯೋತಿ ದೇವೇಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್, ಪಂಚಮಸಾಲಿ ಸಮಾಜದ ಮಹಿಳಾ ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಮುಖಂಡರಾದ ಜಿತೇಂದ್ರ ಎನ್ ಹುಲಿಕುಂಟೆ, ವೀರಶೈವ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್ ಎಂ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.