ಬೆಂಗಳೂರು: ನಗರದ ಕೆಆರ್ ಪುರಂನಲ್ಲಿ ತುಂಡು ತುಂಡಾಗಿ ಕತ್ತರಿಸಿ ಹತ್ಯೆಯಾಗಿರುವ ವೃದ್ಧೆ ಬಿಜೆಪಿಯ ಕಾರ್ಯಕರ್ತೆ ಎಂಬುದಾಗಿ ಬಯಲಾಗಿದೆ.
ಮೃತ ಸುಶೀಲಮ್ಮ (76) ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಬೆಂಗಳೂರಿಗೆ ಬಂದು ನೆಲೆಸಿದ್ದರು. ಆಸ್ತಿ ಮಾರಾಟದಿಂದ ಬಂದಿದ್ದ ಹಣದಲ್ಲಿ ಮನೆಯನ್ನ ಲೀಸ್ ಗೆ ಪಡೆದು ವಾಸವಿದ್ದರು. ಸುಶೀಲಮ್ಮಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದಾನೆ. ಆದರೆ ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಸುಶೀಲಮ್ಮ ಕಿರಿಯ ಪುತ್ರಿ ಕೂಡ ಅದೇ ಕಟ್ಟಡದಲ್ಲಿ ವಾಸವಾಗಿದ್ದರು. ಪುತ್ರ ಪ್ರತೀ ತಿಂಗಳು ತಾಯಿಗೆ 2 ರಿಂದ 3 ಸಾವಿರ ಹಣವನ್ನು ನೀಡುತ್ತಿದ್ದನು.
ಇತ್ತ ಸುಶೀಲಮ್ಮ ಅವರು ಕೆಲವೊಮ್ಮೆ ಮನೆಯಿಂದ ಹೋದ್ರೆ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಹೀಗಾಗಿ ಮಕ್ಕಳು ಕೂಡ ಅಷ್ಟೊಂದು ತಲೆ ಕೆಡಿಸಿಕೊಂಡು ಹುಡುಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಜ್ಜಿ ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ತುಂಡು ತುಂಡಾಗಿ ಕತ್ತರಿಸಿ ವೃದ್ಧೆಯ ಭೀಕರ ಹತ್ಯೆ
ಬೆಳಕಿಗೆ ಬಂದಿದ್ದು ಹೇಗೆ..?: ನಿಸರ್ಗ ಲೇಔಟ್ನ ಮನೆಗಳ ಓಣಿಯಲ್ಲಿ 2 ದಿನಗಳಿಂದ 10 ಲೀಟರ್ ಸಾಮರ್ಥ್ಯದ ಡ್ರಮ್ ಒಂದು ಅನಾಥವಾಗಿ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಭಾನುವಾರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಡ್ರಮ್ ಒಳಗೆ ವೃದ್ಧೆಯ ಮೃತದೇಹ ಇರುವುದು ಬಯಲಾಗಿದೆ. ಅಲ್ಲದೇ ಈ ಕೊಲೆಯ ಹಿಂದೆ ಪರಿಚಿತರ ಕೈವಾಡ ಶಂಕೆ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರ: ಹಿಂದಿನ ಬಾರಿಯ ಚುನಾವಣಾ ಪ್ರಚಾರದಲ್ಲಿ ಸುಶೀಲಮ್ಮಗೆ ದಿನೇಶ್ ಎಂಬಾತನ ಪರಿಚಯವಾಗಿತ್ತು. ಈತ ಆಗಾಗ ಮನೆಗೆ ಬಂದು ಸುಶೀಲಮ್ಮನ ಮಾತಾಡಿಸಿಕೊಂಡು ಹೋಗುತ್ತಿದ್ದನು. ಅಂತೆಯೇ ಭಾನುವಾರವೂ ಬಂದಿದ್ದು, ತಾಯಿ ಜೊತೆ ಮಾತನಾಡುತ್ತಿದ್ದಿದ್ದನ್ನು ಸುಶೀಲಮ್ಮನ ಮೊಮ್ಮಗಳು ನೋಡಿದ್ದಾಳೆ. ಹೀಗಾಗಿ ದಿನೇಶ್ ಮೇಲೆ ಅನುಮಾನ ಹೆಚ್ಚಾಗಿದೆ. ಶಂಕೆಯ ಮೇರೆಗೆ ಸುಶೀಲಮ್ಮನ ಪರಿಚಿತ ದಿನೇಶ್ ಹಾಗೂ ಆತನ ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಣಕ್ಕಾಗಿ ಕೊಲೆ ಶಂಕೆ: ಸುಶೀಲಮ್ಮನ ಹತ್ಯೆ ಪ್ರಕರಣಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಬಯಲಾಗಬೇಕಿದೆ. ಆದರೆ ಹಣಕ್ಕಾಗಿ ದಿನೇಶ್ ಕೊಲೆ ಮಾಡಿರುವ ಅನುಮಾನಗಳಿವೆ. ಸದ್ಯ ಪೊಲೀಸರು ದಿನೇಶ್ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.