ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ (Family Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ಮನೆಯಿಂದ ಕೊಲೆ ಕೃತ್ಯಕ್ಕೆ ಬಳಸಿದ್ದ ಚೂರಿ ಮತ್ತಿತರ ಆಯುಧಗಳನ್ನು (Weapons) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಜರು ವೇಳೆ ಮಂಗಳೂರಿನ (Mangaluru) ಬಿಜೈ (Bejai) ಅಪಾರ್ಟ್ಮೆಂಟ್ನಲ್ಲಿ ಆಯುಧಗಳನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಆರೋಪಿ ಚೂರಿಯನ್ನು ನದಿಗೆ ಎಸೆದಿದ್ದೇನೆ ಎಂದು ಹೇಳಿಕೆ ನೀಡಿದ್ದ. ಇನ್ನು ನಾಲ್ವರ ಕೊಲೆ ಸಂದರ್ಭ ಆರೋಪಿ ತೊಟ್ಟಿದ್ದ ಬಟ್ಟೆ ರಕ್ತಸಿಕ್ತವಾಗಿದ್ದು, ಈ ಬಟ್ಟೆಯನ್ನು ದಾರಿಯಲ್ಲಿ ಸುಟ್ಟುಹಾಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಇರಿದ ಪಾಪಿ ಪತಿ!
ಪೊಲೀಸರ ವಿಚಾರಣೆ ವೇಳೆ ಆರೋಪಿ ಪ್ರವೀಣ್ ಚೌಗಲೆ ಈ ಬಗ್ಗೆ ಮಾಹಿತಿ ನೀಡಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುರತ್ಕಲ್ ಸಮೀಪ ಬಟ್ಟೆ ಸುಟ್ಟಿರುವ ಸಾಧ್ಯತೆ ಇದೆ. ಈ ಕುರಿತು ಇಂದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಹಜರು ಮಾಡಲಿದ್ದಾರೆ. ಇದನ್ನೂ ಓದಿ: 2 ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದ ಸಾವು
ಏನಿದು ಪ್ರಕರಣ?
ನವೆಂಬರ್ 12ರಂದು ಉಡುಪಿಯ ನೇಜಾರು ಎಂಬಲ್ಲಿ ಆರೋಪಿ ಪ್ರವೀಣ್ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದಾನೆ. ಮೃತರನ್ನು ಹಸೀನಾ, ಅಫ್ನಾನ್, ಅಯ್ನಝ್, ಆಸಿಂ ಎಂದು ಗುರುತಿಸಲಾಗಿದೆ. ನಾಲ್ವರನ್ನೂ ಹರಿತವಾದ ಆಯುಧಗಳಿಂದ ಇರಿದು ಕೊಂದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಹಸೀನಾ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಹತ್ಯೆ ನಡೆದಿದೆ. ಇದನ್ನೂ ಓದಿ: ವಿಶಾಖಪಟ್ಟಣಂ ಬಂದರಿನಲ್ಲಿ ಬೆಂಕಿ ಅವಘಡ- 40 ದೋಣಿಗಳು ಭಸ್ಮ
ಘಟನೆಯ ಬಳಿಕ ಆರೋಪಿ ಪ್ರವೀಣ್ ಬೆಳಗಾವಿಯ ರಾಯಭಾಗ ತಾಲೂಕಿನ ಕುಡಚಿಯ ನೀರಾವರಿ ಇಲಾಖೆ ಅಧಿಕಾರಿ ಸಂಬಂಧಿ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದ ವೇಳೆ ಕುಡಚಿ ಪೊಲೀಸರ ಸಹಾಯದಿಂದ ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗಳು ಬಲಿ- ಐವರು ಅಧಿಕಾರಿಗಳ ಅಮಾನತು