ಉಡುಪಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದ ವರ್ತಕರಿಗೆ ದೇವಸ್ಥಾನ ಜಾತ್ರಾ ಉತ್ಸವಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಉಡುಪಿ ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಅಬೂಬಕರ್ ಆತ್ರಾಡಿ, ಪೇಜಾವರ ಸ್ವಾಮೀಜಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೇ, ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡುವ ಸಂಬಂಧ ಮಾತುಕತೆಯನ್ನೂ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲೆಸಬೇಕೆಂಬ ಉದ್ದೇಶದಿಂದ ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ಮುಸ್ಲಿಂ ಸಮುದಾಯ ಸಹ ಶಾಂತಿಯನ್ನೇ ಬಯಸುತ್ತದೆ. ಆದರೆ, ಯಾರೋ ಒಬ್ಬರು-ಇಬ್ಬರು ಮಾಡುವ ತಪ್ಪಿಗೆ ಇಡೀ ಸಮಾಜವನ್ನು ದ್ವೇಷಿಸುವಂತಾಗಿದೆ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ
ನಾವೆಲ್ಲರೂ ಒಂದೇ ತಾಯಿಯ ಮಕ್ಕಳ ಹಾಗೇ ಸಹಬಾಳ್ವೆಯಿಂದ ಬಾಳಬೇಕು. ಹಿಂದೆ ಆದ ಘಟನೆಗಳನ್ನು ಮರೆತು ಸಹಬಾಳ್ವೆಯಿಂದ ಬಾಳೋಣ. ಈಗಾಗಲೇ ಒಂದು ಸಮಿತಿ ರಚನೆ ಮಾಡುವಂತೆ ಸ್ವಾಮೀಜಿ ಅವರು ಸೂಚನೆ ಕೊಟ್ಟಿದ್ದಾರೆ. ಜೊತೆಗೆ ವ್ಯಾಪಾರ ನಿರ್ಬಂಧಕ್ಕೆ ಪರಿಹಾರ ಸೂಚಿಸುವ ಭರವಸೆಯನ್ನೂ ನೀಡಿದ್ದಾರೆ ಎಂದರು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎನ್ನುವ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್ಡಿಕೆ ಆಗ್ರಹ
ಇದೇ ವೇಳೆ `ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ನಿಷೇಧ ಹೇರಿದರೆ ನಮ್ಮ ವ್ಯಾಪಾರ ನಮಗೆ ಇದೆ. ಹುಟ್ಟಿಸಿದವ ಹುಲ್ಲು ಮೇಯಿಸದೆ ಇರುವುದಿಲ್ಲ’ ಎಂಬ ಎಸ್ಡಿಪಿಐ ರಾಜ್ಯಾಧ್ಯಕ್ಷ ಮಜೀರ್ ಅವರ ಹೇಳಿಗೆ ಪ್ರತಿಕ್ರಿಯಿಸಿದ ಅಬೂಬಕರ್, ಮುಸ್ಲಿಂ ಸಮುದಾಯದ ಜನರೊಂದಿಗೆ ನಾವು ಯಾವುದೇ ಸಭೆ ನಡೆಸಿಲ್ಲ. ಚರ್ಚೆ ಹಲವು ದಾರಿಗಳಲ್ಲಿ ಸಾಗಿ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ಮನಸ್ಸಿಗೆ ಬಂದ ಹಾಗೆ ಹೇಳಿಕೆಗಳನ್ನು ನೀಡುವುದರಿಂದ ಸಮಾಜದಲ್ಲಿ ಶಾಂತಿ ಕದಡುತ್ತದೆ. ಮಾತಿನಲ್ಲಿ ಪ್ರೀತಿ ತೋರಿದರೆ ಸಮಾಜದ ಶಾಂತಿ ಕದಡುವುದಿಲ್ಲ ಎಂದು ಸಲಹೆ ನೀಡಿದ್ದಾರೆ.