ಚೆನ್ನೈ: ತಮಿಳುನಾಡಿನ (Tamil Nadu) ವಿಲ್ಲುಪುರಂ ಜಿಲ್ಲೆಯಲ್ಲಿ 68 ಜನರ ಸಾವಿಗೆ ಕಾರಣವಾದ ಅಕ್ರಮ ಮದ್ಯ ದುರಂತ (Kallakurichi Hooch Tragedy0 ಪ್ರಕರಣವನ್ನು ಕೇಂದ್ರ ತನಿಖಾ ದಳದ (CBI) ತನಿಖೆಗೆ ಮದ್ರಾಸ್ ಹೈಕೋರ್ಟ್ (Madras High Court) ಆದೇಶಿಸಿದೆ.
ಡಿಎಂಕೆ (DMK) ಸರ್ಕಾರ ಈ ಪ್ರಕರಣವನ್ನು ಈಗಾಗಲೇ ಸಿಐಡಿಯ ಕ್ರೈಂ ಬ್ರಾಂಚ್ ವಿಭಾಗಕ್ಕೆ ವರ್ಗಾಯಿಸಿತ್ತು. ಇನ್ನೂ ಸಿಬಿಐ ತನಿಖೆಗೆ ಈ ಪ್ರಕರಣದ ವರ್ಗಾವಣೆಯನ್ನು ವಿರೋಧಿಸಿತ್ತು. ಈ ಸಂಬಂಧ ಐಎಡಿಎಂಕೆ, ಪಿಎಂಕೆ ಮತ್ತು ಬಿಜೆಪಿ ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ಆಡಳಿತಾರೂಢ ಡಿಎಂಕೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.
ಪ್ರಕರಣ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಎಸ್ಪಿಯನ್ನು ಅಮಾನತು ಮಾಡಲಾಗಿದೆ. ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
ಅರ್ಜಿದಾರರ ಪರ ವಕೀಲರು, ಈ ಹಿಂದೆ ಇದೇ ರೀತಿಯ ದುರಂತದಿಂದ ಸರ್ಕಾರವು ಯಾವುದೇ ಪಾಠವನ್ನು ಕಲಿತಿಲ್ಲ. ಪಕ್ಕದ ರಾಜ್ಯಗಳಿಂದ ಮೆಥೆನಾಲ್ ಬರುತ್ತಿದೆ. ಇದರಿಂದ ಪ್ರಕರಣವನ್ನು ಸಿಬಿಐಗೆ ನಿಭಾಯಿಸಲು ಸುಲಭವಾಗಲಿದೆ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸಿಬಿಐ ತನಿಖೆಗೆ ಸಮ್ಮತಿಸಿದೆ.
ಈ ಬಗ್ಗೆ ವಿರೋಧ ಪಕ್ಷದ ಎಐಎಡಿಎಂಕೆಯ ಕಾನೂನು ವಿಭಾಗದ ಕಾರ್ಯದರ್ಶಿ ಇನ್ಬದುರೈ, ಪ್ರತಿಕ್ರಿಯಿಸಿ, ಈ ಆದೇಶವು ತಮಿಳುನಾಡಿನ ಕಳಪೆ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.
ಪಿಎಂಕೆ ನಾಯಕ ಮತ್ತು ವಕೀಲ ಬಾಲು ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಡಿಎಂಕೆ, ಸಿಬಿಐ ತನಿಖೆಗೆ ಸ್ವಯಂಪ್ರೇರಿತರಾಗಿ ಒಪ್ಪಬೇಕಿತ್ತು. ದುರಂತದಲ್ಲಿ ಬಲಿಯಾದ ಕುಟುಂಬಗಳಿಗೆ ನ್ಯಾಯದ ಅಗತ್ಯವಿದೆ. ಡಿಎಂಕೆ ಸುಪ್ರೀಂ ಕೋರ್ಟ್ನಲ್ಲಿ ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ನಾವು ಭಾವಿಸಿದ್ದೇವೆ ಎಂದಿದ್ದಾರೆ.
ಡಿಎಂಕೆ ವಕ್ತಾರ ಕಾನ್ಸ್ಟಂಟೈನ್, ಮಾತನಾಡಿ, ಆದೇಶದ ಬಗ್ಗೆ ನಾವು ಪ್ರತಿಕ್ರಿಯಿಸಲು ಏನೂ ಇಲ್ಲ. ಆದರೆ ಸಿಬಿಐ ತನಿಖೆಯು ನ್ಯಾಯವನ್ನು ವಿಳಂಬಗೊಳಿಸುತ್ತದೆ ಎಂಬುದು ನಮ್ಮ ಆತಂಕ ಎಂದಿದ್ದಾರೆ.