ಶಿವಮೊಗ್ಗ: ಅನಾರೋಗ್ಯದಿಂದ ಮೃತಪಟ್ಟಿದ್ದ ‘ಪಬ್ಲಿಕ್ ಟಿವಿ’ (Public TV) ಶಿವಮೊಗ್ಗ (Shivamogga) ಜಿಲ್ಲಾ ವರದಿಗಾರ ಕೆ.ವಿ ಶಶಿಧರ್ (K.V Shashidhar) ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಹಾಸನದ ಅರಸೀಕೆರೆಯ ಎಸ್.ಕಲ್ಲಹಳ್ಳಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ನೆರವೇರಿದೆ.
ಮೃತರ ಅಂತ್ಯಸಂಸ್ಕಾರದಲ್ಲಿ ʻಪಬ್ಲಿಕ್ ಟಿವಿʼ ಸಂಪಾದಕ ದಿವಾಕರ್, ಜಿಲ್ಲಾ ಸುದ್ದಿ ಸಂಯೋಜಕ ಮನೋಹರ್, ಹೆಚ್ಆರ್ ವಿಭಾಗದ ಶಂಕರ್ ಹಾಗೂ ಪೊಲಿಟಿಕಲ್ ಬ್ಯೂರೋ ಚೀಫ್ ರವೀಶ್ ಪಾಲ್ಗೊಂಡಿದ್ದರು. ಈ ವೇಳೆ ಶಶಿಧರ್ ಅವರ ತಂದೆಗೆ ದಿವಾಕರ್ ಅವರು ಸಾಂತ್ವನ ಹೇಳಿದ್ದಾರೆ.
ಪಬ್ಲಿಕ್ ಟಿವಿಯಲ್ಲಿ ಕಳೆದ 6 ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಶಶಿಧರ್ ಅವರಿಗೆ 40 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ. ಶಶಿಧರ್ ಕಳೆದ 16 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಪಬ್ಲಿಕ್ ಟಿವಿ ಬಳಗ ಶಶಿಧರ್ ನಿಧನಕ್ಕೆ ಸಂತಾಪ ಸೂಚಿಸಿದೆ.