ಮೈಸೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡೋದು ಬಿಡೋದು ಕಾಂಗ್ರೆಸ್ ಇಷ್ಟ. ಯಾರು ಯಾರನ್ನು ಚಿತ್ರ ನೋಡಿ ಎಂದು ಬಲವಂತ ಮಾಡಲು ಆಗುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಫೈಲ್ಸ್ ಸಿನಿಮಾ ನಾನು ಸಹ ನೋಡಿದ್ದೇನೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವುದು ನಮ್ಮ ಇಷ್ಟ. ನೋಡದೇ ಇರುವುದು ಕಾಂಗ್ರೆಸ್ ಇಷ್ಟ. ಯಾರು ಯಾರನ್ನು ಚಿತ್ರ ನೋಡಿ ಎಂದು ಬಲವಂತ ಮಾಡಲು ಆಗುವುದಿಲ್ಲ. ಇತಿಹಾಸದಲ್ಲಿ ಏನೂ ನಡೆದಿದೆ ಅಂತ ಜನರಿಗೆ ಹೇಳಬೇಕು. ಈ ಕೆಲಸವನ್ನು ಈ ಚಿತ್ರ ಮಾಡಿದೆ. ಅದರಲ್ಲಿ ತಪ್ಪೇನಿದೆ. ಒಂದು ಸಮುದಾಯದ ವಿರುದ್ಧ ಸಿನಿಮಾ ಇದು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾದರೆ ನಡೆದ ಘಟನಾವಳಿಗಳನ್ನು ಜನರಿಗೆ ತಿಳಿಸುವುದೇ ಬೇಡವಾ? ಎಂದು ಪ್ರಶ್ನಿಸಿದ್ದಾರೆ.
ಹಿಜಬ್ಗೆ ಪಟ್ಟು ಹಿಡಿದು ಪರೀಕ್ಷೆಗೆ ಗೈರು ಹಾಜರಾದರೆ ಅವರಿಗೆ ಮರು ಪರೀಕ್ಷೆ ಇಲ್ಲ. ಈ ವಿಚಾರದಲ್ಲಿ ಸರ್ಕಾರದ ನಿಲುವಿನಲ್ಲಿ ಯಾವುದೇ ಹಂತದಲ್ಲೂ ಬದಲಾವಣೆ ಇಲ್ಲ. ಹೈಕೋರ್ಟ್ ಆದೇಶ ಚಾಚು ತಪ್ಪದೇ ಪಾಲಿಸುವುದು ಸರ್ಕಾರದ ಕರ್ತವ್ಯ. ಈ ಕರ್ತವ್ಯದಲ್ಲಿ ವಿಫಲರಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿ ಕೊಳ್ಳಲು ನಾವು ಸಿದ್ಧರಿಲ್ಲ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ: ಸಿದ್ದರಾಮಯ್ಯ
ಸದನ ಈ ವಾರ ಮೊಟಕುಗೊಳಿಸುವುದಿಲ್ಲ. ಮಾರ್ಚ್ 30 ರವರೆಗೆ ನಡೆಯುತ್ತದೆ. ಯಾವುದೇ ಕಾರಣಕ್ಕೂ ಸದನ ಮೊಟಕು ಮಾಡುವುದಿಲ್ಲ ಎಂದರು. ಇದೇ ವೇಳೆ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಸೇರಿಸು ವಿಚಾರವಾಗಿ ಮಾತನಾಡಿದ ಅವರು, ಇಂತಹ ಯಾವ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ. ಪ್ರಸ್ತಾಪವೇ ಇಲ್ಲ ಎಂದ ಮೇಲೆ ಚರ್ಚೆ ಯಾಕೆ ಬೇಕು ಹೇಳಿ? ಈ ಬಗ್ಗೆ ಶಿಕ್ಷಣ ಸಚಿವರೆ ಸ್ಪಷ್ಟಪಡಿಸಿದ್ದಾರೆ. ಉಳಿದ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ಒತ್ತಾಯಿಸುವೆ: ಬಿಎಸ್ವೈ