ವಿಜಯಪುರ: ಸೆಟ್ಟೇರುವ ಮುನ್ನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಚಿತ್ರಕ್ಕೆ ಮತ್ತೆ ವಿಘ್ನ ಉಂಟಾಗಿದೆ. `ಒಡೆಯರ್’ ಚಿತ್ರದ ಹೆಸರು ಬದಲಿಸಲು ಕರ್ನಾಟಕ ಯುವಘರ್ಜನೆ ಸಂಘಟನೆ ದೂರು ದಾಖಲಿಸಿದೆ.
ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಚಿತ್ರ ನಿರ್ಮಾಪಕ ಮತ್ತು ಚಿತ್ರ ತಂಡದ ವಿರುದ್ಧ ದೂರು ದಾಖಲಾಗಿದೆ. ಒಡೆಯರ್ ಎಂಬ ಹೆಸರಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಅವರು ನಾಡು ನುಡಿ, ನೆಲ, ಜಲ, ಕಲೆ ಸಂಸ್ಕೃತಿ ವೈಭವಗಳಿಗೆ ಕೊಟ್ಟಿರುವ ಕೊಡುಗೆ ಅನೇಕ ಇವೆ. ಅಲ್ಲದೆ ರಾಜ್ಯದ ಜನತೆ ಮೈಸೂರು ಅರಸರ ಬಗ್ಗೆ ಈಗಲೂ ಅಪಾರವಾದ ಗೌರವ ಹೊಂದಿದ್ದಾರೆ. ಹೀಗಿದ್ದಾಗ ವ್ಯಾಪಾರಿ ಚಿತ್ರಕ್ಕಾಗಲಿ, ಹಾಸ್ಯ ಅಥವಾ ರೌಡಿಸಂ ಚಿತ್ರಕ್ಕಾಗಲಿ ಆ ಹೆಸರು ಬಳಸಿದರೆ ಜನರ ಭಾವನೆಗೆ ಧಕ್ಕೆ ಉಂಟಾಗುತ್ತೆ. ಹೀಗಾಗಿ ಹೆಸರು ಬದಲಿಸಲಿ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಹೆಸರು ಬದಲಾಯಿಸದಿದ್ದರೆ ಮೈಸೂರು ಅರಸರ ಚರಿತ್ರೆ ಕುರಿತು ಚಿತ್ರ ತೆಗೆಯಲಿ ಎಂದು ಒತ್ತಾಯಿಸಲಾಗಿದೆ. ಅಲ್ಲದೇ ಹೆಸರು ಬದಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಯುವಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಆಸೀಫ್ ಒತ್ತಾಯಿಸಿದ್ದಾರೆ.
ಕಳೆದ ಕೆಲ ಚಿತ್ರಕ್ಕೆ ಒಡೆಯರ್ ಶೀರ್ಷಿಕೆ ನೀಡಿರುವ ವಿಚಾರವಾಗಿ ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು. ಅಲ್ಲದೇ ಅರಸು ಯುವಜನ ವೇದಿಕೆ ಜೂಡ ಒಡೆಯರ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿತ್ತು. ಆದರೆ ಚಿತ್ರಕ್ಕೆ ಒಡೆಯರ್ ಹೆಸರಿಡುವ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಜಮಾತೆ ಪ್ರಮೋದದೇವಿ ಒಡೆಯರ್ ಅವರು ಸಿನಿಮಾ ಒಡೆಯರ್ ಹೆಸರಿಡಲು ಯಾವುದೇ ಅಕ್ಷೇಪವಿಲ್ಲ. ಆದರೆ ಮೈಸೂರು ರಾಜವಂಶಕ್ಕೆ ಸಂಬಂಧಪಟ್ಟ ಅಂಶಗಳು ಚಿತ್ರದಲ್ಲಿ ಇದ್ದರೆ ನನ್ನ ಆಕ್ಷೇಪವಿದೆ ಎಂದು ಹೇಳಿದ್ದರು.
ದರ್ಶನ್ ಹುಟ್ಟುಹಬ್ಬದ ದಿನ ಅವರ ಮುಂದಿನ ಚಿತ್ರ ಒಡೆಯರ್ ಶೀರ್ಷಿಕೆ ಬಹಿರಂಗವಾಗಿತ್ತು. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಒಡೆಯರ್ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ.