ಬೆಳಗಾವಿ: ರಾಜ್ಯದ ಎಲ್ಲಾ ಪ್ರತಿಮೆಗಳ ಮುಂದೆ ಸರ್ಕಾರ ಸಿಸಿಟಿವಿ ಅಳವಡಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಹಲಸಿ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣದ ಹಿನ್ನೆಲೆ ನಗರದ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ, ಬಸವಣ್ಣನವರು ಮತ್ತು ಶಿವಾಜಿಯವರ ಮೂರ್ತಿಗೆ ಮಸಿ ಬಳಿದಿದ್ದನ್ನು ಖಂಡಿಸುತ್ತೇವೆ ಎಂದರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
ಎಂಇಎಸ್ ಹೆಸರು ಹೇಳಿಕೊಂಡು ಕೆಲ ದುಷ್ಕರ್ಮಿಗಳು ಗಲಾಟೆ ಮಾಡುತ್ತಿದ್ದಾರೆ. ಮರಾಠಿ ಭಾಷಿಕರು ಮತ್ತು ಕನ್ನಡಿಗರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹಲಸಿ ಗ್ರಾಮದಲ್ಲಿ ಬಸವಣ್ಣನವರ ಪ್ರತಿಮೆ ವಿಘ್ನಗೊಳಿಸಿದ್ದಾರೆ. ಎಂಇಎಸ್ ಕಾನೂನಾತ್ಮಕ ಹೋರಾಟ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಘೋಷಣೆ ಮಾಡಿದ ನಿಲುವನ್ನ ನಾವು ಸ್ವಾಗತ ಮಾಡುತ್ತೇವೆ. ಕನ್ನಡ ಧ್ವಜ ಸುಟ್ಟಿರುವುದು ಕನ್ನಡಮ್ಮನ ಸೀರೆಯನ್ನೇ ಸುಟ್ಟಷ್ಟು ನೋವಾಗಿದೆ. ರಾಜ್ಯದ ಎಲ್ಲಾ ಪ್ರತಿಮೆಗಳ ಮುಂದೆ ಸರ್ಕಾರ ಸಿಸಿಟಿವಿ ಅಳವಡಿಸಬೇಕು. ಸುವರ್ಣ ಸೌಧದ ಮುಂದೆ ರಾಯಣ್ಣ ಮತ್ತು ಚನ್ನಮ್ಮ ಮೂರ್ತಿ ಸ್ಥಾಪನೆಗೆ ಆದಷ್ಟು ಬೇಗ ಶಂಕುಸ್ಥಾಪನೆ ಮಾಡಲಿ. ಬಸವಣ್ಣ ಮತ್ತು ರಾಯಣ್ಣ ಅವರ ಮೂರ್ತಿಗೆ ಧಕ್ಕೆಯಾಗಿದ್ದು, ಜಿಲ್ಲೆಯ ಎಲ್ಲಾ ನಾಯಕರು ಮಾತನಾಡುವ ಕೆಲಸ ಮಾಡಲಿ ಎಂದು ನುಡಿದರು.
ಹಲಸಿಯಲ್ಲಿ ಬಸವಣ್ಣನವರ ಮೂರ್ತಿಗೆ ಧಕ್ಕೆ ಮಾಡಿದ್ದನ್ನ ಖಂಡಿಸಿ ಚರ್ಚೆ ಮಾಡಿ ಪ್ರತಿಭಟನೆ ಮಾಡುತ್ತೇವೆ. ನಾಳೆ ಎಲ್ಲರೊಂದಿಗೆ ಚರ್ಚೆ ಮಾಡಿ ಪ್ರತಿಭಟನೆ ದಿನಾಂಕ ನಿಗದಿ ಮಾಡುತ್ತೇವೆ. ಎರಡು ದಿನಗಳಲ್ಲಿ ಹೋರಾಟದ ದಿನಾಂಕ ನಿಗದಿ ಮಾಡುತ್ತೇವೆ. ದಾರ್ಶನಿಕರ ಮೂರ್ತಿ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಉಡುಪಿಯ ಇಬ್ಬರಲ್ಲಿ ಓಮಿಕ್ರಾನ್ ವೈರಸ್ ಪತ್ತೆ
ಭಾರತ ಮಾತೆಯ ಮೇಲೆ ದೌರ್ಜನ್ಯ ಮಾಡಿದಂತೆ ಆಗುತ್ತೆ. ಮೂರ್ತಿಗಳ ರಕ್ಷಣೆಗೆ ಒಂದು ಹೊಸ ನಿಯಮ ಸರ್ಕಾರ ಮಾಡಲಿ. ಈ ಎಲ್ಲ ಘಟನೆಗೆ ಎಂಇಎಸ್ ನವರೇ ಕಾರಣ ಅಂತಾ ಇಡೀ ಕರ್ನಾಟಕ ಹೇಳುತ್ತೆ. ಈ ಸಂಘಟನೆ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.