-ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ
ಕೋಲಾರ: ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ, ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತೆ. ಮುಂದಿನ ವರ್ಷ ನಾವೇ ಅಧಿಕಾರಕ್ಕೆ ಬರೋರು ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಇಲ್ಲಿನ ಬೈರೇಗೌಡನಗರದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ರಾಜ್ಯದಲ್ಲಿ ಅತಂತ್ರ ಸರ್ಕಾರವಿದೆ. ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಕಾರ್ಯಕರ್ತರು ಮತ್ತೆ ಪ್ರಚಾರಕ್ಕೆ ಸಿದ್ಧರಾಗಬೇಕು. ಹಿಂದಿನ ಚುನಾವಣೆಯ ಅಹಿತಕರ ಘಟನೆ ಮರೆತು ಪಕ್ಷಕ್ಕಾಗಿ ಕೆಲಸ ಮಾಡಬೇಕು. ನಾನು ಇನ್ನು ಮುಂದೆ ಕ್ಷೇತ್ರದಲ್ಲಿದ್ದು ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಅಂತಾ ಅಂದ್ರು.
ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ವರ್ತೂರ್ ಪ್ರಕಾಶ್ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಹೀಗಾಗಿ ಆತ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ಆಗಮಿಸಿದ್ದ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಬಾಡೂಟ ಸಿದ್ಧ ಪಡಿಸಲಾಗಿತ್ತು. 1,200ಕ್ಕೂ ಹೆಚ್ಚು ಕಾರ್ಯಕರ್ತರು ಬಾಡೂಟ ಸವಿದಿದ್ದಾರೆ.
ಕಾಂಗ್ರೆಸ್ನಲ್ಲಿ 80 ಜನ ಹಿರಿಯ ಶಾಸಕರಿದ್ದಾರೆ. ಅವರಲ್ಲಿ 20 ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತದೆ. 60 ಜನ ಶಾಸಕರು ಹಾಗೇ ಉಳಿಯುತ್ತಾರೆ. ಹುದ್ದೆಗಳ ಹಂಚಿಕೆ ಸಮಸ್ಯೆಯಿಂದಾಗಿ 2019ರಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ. ಬಿಜೆಪಿ ಮತ್ತೇ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.