– ಮುಜುಗರ ತಪ್ಪಿಸಲು ಸಮನ್ವಯ ಸೂತ್ರ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಜಾರಿ ಮಾಡ ಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ.
ಆರ್ಥಿಕ ಶಿಸ್ತಿಗೆ ಧಕ್ಕೆಯಾಗದಂತೆ ರೈತರ ಸಾಲ ಮನ್ನಾಕ್ಕೆ ಒಪ್ಪಿಗೆ, ಭವಿಷ್ಯದಲ್ಲಿ ಮೈತ್ರಿಗೆ ಮುಜುಗರ ತರುವ ಹೇಳಿಕೆಗಳನ್ನು ಕೊಡಕೂಡದೆಂದು ನಿರ್ಧರಿಸಲಾಗಿದೆ. ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಪರಮೇಶ್ವರ್, ಉಸ್ತುವಾರಿ ಕೆಸಿ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಾಲ್ಗೊಂಡಿದ್ದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಈ ಕೆಳಗಿನಂತಿವೆ.
* 2017ರವರೆಗಿನ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿನ ಕೃಷಿ ಸಾಲ ಮನ್ನಾ.
* ಕಾಂಗ್ರೆಸ್ ಪ್ರಣಾಳಿಕೆಯಂತೆ ಐದು ವರ್ಷಗಳಲ್ಲಿ ನೀರಾವರಿಗೆ 1.25 ಕೋಟಿ ರೂ. ಮೀಸಲು.
* ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಆರೋಗ್ಯ ಕರ್ನಾಟಕ- ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿ.
* ಐದು ವರ್ಷಗಳಲ್ಲಿ 20 ಲಕ್ಷ ಮನೆಗಳ ನಿರ್ಮಾಣ, 1 ಕೋಟಿ ಉದ್ಯೋಗ ಸೃಷ್ಟಿ.
* ಹೊಸ ಕ್ರೀಡಾ ನೀತಿ ಜಾರಿ.
* ಸಚಿವರು ತಮ್ಮ ಸಚಿವಾಲಯದ ವಿಷಯ ಬಿಟ್ಟು ಬೇರೆ ಏನನ್ನೂ ಮಾತಾಡುವಂತಿಲ್ಲ.
* ಎರಡೂ ಪಕ್ಷಗಳ ವಕ್ತಾರರಷ್ಟೇ ಮಾಧ್ಯಮಗಳಿಗೆ ಹೇಳಿಕೆ ನೀಡಬಹುದು.
* ಸಮನ್ವಯ ಸಮಿತಿ ಮುಖ್ಯಸ್ಥ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಯಾಬಿನೆಟ್ ಸ್ಥಾನಮಾನ.
* ಬಜೆಟ್ ಬಳಿಕ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳಿಗೆ ನೇಮಕ.
ಒಂದು ಕಡೆ ಸುಗುಮ ಆಡಳಿತ, ಹೊಂದಾಣಿಕೆಗೆ ಸಮನ್ವಯ ಸೂತ್ರಗಳನ್ನು ಕಂಡುಕೊಂಡಿದ್ದರೂ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ಸಂಘರ್ಷ ಮುಂದುವರಿದಿದೆ. ಹಿರಿಯ ಶಾಸಕರನ್ನು ಸಮಾಧಾನಪಡಿಸೋ ಸಲುವಾಗಿ ಎರಡೂ ಪಕ್ಷಗಳು ತಮ್ಮ ಪಟ್ಟನ್ನು ಸಡಿಲಗೊಳಿಸುತ್ತಿಲ್ಲ.
ಸದ್ಯ ಬಸವರಾಜ್ ಹೊರಟ್ಟಿ ಹಂಗಾಮಿ ಸಭಾಪತಿಯಾಗಿದ್ದು, ಅವರಿಗೆ ಸಚಿವ ಸ್ಥಾನ ಕೊಡುವುದು ಅಸಾಧ್ಯವಾಗಿರೋ ಹಿನ್ನೆಲೆಯಲ್ಲಿ ಅವರೇ ಮುಂದುವರಿಯಲಿ ಅನ್ನೋದು ಜೆಡಿಎಸ್ ಪಟ್ಟು. ಆದ್ರೆ ಹಿರಿಯ ಸದಸ್ಯ ಎಸ್ ಆರ್ ಪಾಟೀಲ್ರನ್ನು ಸಭಾಪತಿ ಮಾಡಲು ಕಾಂಗ್ರೆಸ್ ಕಾತರವಾಗಿದೆ. ಯಾಕಂದ್ರೆ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಒಂದು ವೇಳೆ ಸಭಾಪತಿ ಸ್ಥಾನ ಬಿಟ್ಟುಕೊಟ್ರೆ ಆಗ ಉಪ ಸಭಾಪತಿ ಮತ್ತು ಮುಖ್ಯ ಸಚೇತಕ ಹುದ್ದೆಯನ್ನು ಬಿಟ್ಟುಕೊಡುವ ಪ್ರಸ್ತಾಪವನ್ನೂ ಕೂಡಾ ಮಿತ್ರರು ಪರಸ್ಪರ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.