ಸಿದ್ದು.ಎಸ್ (Siddu) ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ (Arnav Vinyash) ಹಾಗೂ ರಾಣಿ ವರದ್ (Rani Varad) ನಾಯಕ – ನಾಯಕಿಯಾಗಿ ನಟಿಸಿರುವ ಚಿತ್ರ ‘ಸಂತೋಷ ಸಂಗೀತ’ (Santhosh Sangeet). ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.
‘ನಾನು ಮೂಲತಃ ಎಂ.ಸಿ.ಎ ಪದವಿಧರ. ಮಹಾ ಸಿನಿಮಾ ಪ್ರೇಮಿ. ವಾರಕ್ಕೊಂದು ಸಿನಿಮಾ ನೋಡುವವನು. ಚೆನ್ನಾಗಿರುವ ಸಿನಿಮಾ ನೋಡಿದರೆ, ನಾನು ಈ ರೀತಿ ಸಿನಿಮಾ ಮಾಡಬೇಕೆಂದು ಆಸೆ ಪಡುತ್ತಿದ್ದವನು. ಆ ಆಸೆ ಈಗ ಈಡೇರಿದೆ. ಲಾಕ್ ಡೌನ್ ಸಮಯದಲ್ಲಿ ಕಥೆ ಬರೆದಿದ್ದೆ. ಅದನ್ನು ಈಗ ಸಿನಿಮಾ ರೂಪದಲ್ಲಿ ತಂದಿದ್ದೀನಿ. ನಾನೇ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಈ ಚಿತ್ರದಲ್ಲಿ ಲವ್, ಕಾಮಿಡಿ, ವ್ಯಾಪಾರ ಹೀಗೆ ಎಲ್ಲಾ ತರಹದ ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿದೆ. ಇದನ್ನು ಕಮರ್ಷಿಯಲ್ ಲವ್ ಜಾನರ್ ನ ಸಿನಿಮಾ ಎನ್ನಬಹುದು. ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ಈ ಚಿತ್ರದ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ನಿಜ ಜೀವನದಲ್ಲೂ ಪತಿ -ಪತ್ನಿಯಾಗಿರುವ ಅರ್ನವ್ ಹಾಗೂ ರಾಣಿ ತೆರೆಯ ಮೇಲೂ ನಾಯಕ-ನಾಯಕಿಯಾಗಿ ನಟಿಸಿರುವುದು ಈ ಚಿತ್ರದ ವಿಶೇಷ. ದೊಡ್ಡಣ್ಣ, ಅವಿನಾಶ್, ಲಯ ಕೋಕಿಲ, ಕವನ, ಅಮಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ ಮಡೆನೂರು ಮನು, ಹನೀಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯವಾಗಿದೆ ಎಂದರು ನಿರ್ದೇಶಕರು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಹೊಂಬಣ್ಣ, ಪ್ರೇಮಂ ಚಿತ್ರಗಳಲ್ಲಿ ನಟಿಸಿರುವ ನನಗೆ ಇದು ಮೂರನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಅರ್ನವ್ ವಿನ್ಯಾಸ್, ಈ ಚಿತ್ರದಲ್ಲಿ ನನ್ನದು ಉದ್ಯಮಿಯ ಪಾತ್ರವೆಂದು ಹೇಳಿದರು. ಗಂಡ – ಹೆಂಡತಿ ಇಬ್ಬರು ಒಂದೇ ಉದ್ಯಮದಲ್ಲಿದ್ದಾಗ ಯಾವೆಲ್ಲಾ ಸವಾಲು ಎದುರಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದರು ನಾಯಕಿ ರಾಣಿ ವರದ್.
ಕವನ ಹಾಗೂ ಫಸ್ಟ್ rank ರಾಜು ಖ್ಯಾತಿಯ ಅಮಿತ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಜೆ.ಪಿ ನಗರದ ಮಾಜಿ ಕಾರ್ಪೋರೇಟರ್ ಚಂದ್ರಶೇಖರ್ ರಾಜು ಅವರು ಸಂತೋಷ ಸಂಗೀತ ಚಿತ್ರತಂಡಕ್ಕೆ ಶುಭ ಕೋರಿದರು. ಪತ್ರಿಕಾಗೋಷ್ಠಿಗೂ ಮುನ್ನ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರದ ಮೇಕಿಂಗ್ ವೀಡಿಯೋ ಪ್ರದರ್ಶಿಸಲಾಯಿತು.
Web Stories