ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿಗೆಂದು ಹೋಗಿದ್ದ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿರುವುದು ಕಿರುತೆರೆ ಲೋಕಕ್ಕೆ ಆಘಾತ ಮೂಡಿಸಿದೆ. ಅದರಲ್ಲೂ ಆ ಹುಡುಗಿ ಅಷ್ಟೊಂದು ದಪ್ಪ ಇರಲಿಲ್ಲ, ಯಾರು ಆಕೆಯನ್ನು ಆರೀತಿಯಲ್ಲಿ ತಲೆ ಕೆಡಿಸಿದರೋ ಗೊತ್ತಿಲ್ಲ. ಫ್ಯಾಟ್ ಸರ್ಜರಿಗೆಂದು ಹೋದವಳು, ಜೀವಂತವಾಗಿ ವಾಪಸ್ಸು ಬರಲಿಲ್ಲ ಎಂದು ಚೇತನಾ ಸ್ನೇಹಿತೆಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನಾ ತಂದೆ ‘ಮಗಳು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿದ್ದಾಳೆ ಎಂದು ನಮಗೆ ಗೊತ್ತೇ ಇರಲಿಲ್ಲ. ಆಸ್ಪತ್ರೆಯವರು ಕೂಡ ನಮಗೆ ಮಾಹಿತಿ ನೀಡಿಲ್ಲ. ನನ್ನ ಮಗಳು ದಪ್ಪ ಇದ್ದಾಳೆ ಅಂತ ಯಾರೋ ಹೇಳಿದ್ದಾರೆ. ಹಾಗಾಗಿಯೇ ಅವಳು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ. ನನಗೆ ಗೊತ್ತಾಗಿರೋ ಪ್ರಕಾರ, ಆಸ್ಪತ್ರೆಯಲ್ಲಿ ಕೇವಲ ಕೊಬ್ಬು ತಗೆಯುತ್ತೇವೆ ಎಂದು ಹೇಳಿದ್ದರಂತೆ. ಆಮೇಲೆ ಏನಾಯಿತೋ ಗೊತ್ತಿಲ್ಲ. ಅವಳಿಗೆ ಉಸಿರಾಟದ ತೊಂದರೆ ಆಗಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ’ ಎಂದಿದ್ದಾರೆ.
ಇಂಥದ್ದೊಂದು ಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಿರುವ ವಿಷಯವನ್ನು ಸ್ವತಃ ಚೇತನಾ ರಾಜ್ ಕೂಡ ಪಾಲಕರಿಗೆ ಹೇಳಿರಲಿಲ್ಲವಂತೆ. ತಮ್ಮ ಸ್ನೇಹಿತೆಯರ ಜೊತೆಯಾಗಿ ಅವಳು ಆಸ್ಪತ್ರೆ ಸೇರಿದ್ದಾಳೆ. ಈ ವಿಷಯ ಪಾಲಕರಿಗೆ ಗೊತ್ತಾಗುವ ಮುಂಚೆಯೇ ಚೇತನಾ ರಾಜ್ ಅವರನ್ನು ಸ್ನೇಹಿತೆಯರು ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪಾಲಕರು ಅಳಲು ತೋಡಿಕೊಂಡರು. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್ಫ್ರೆಂಡ್ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ
ಇತ್ತೀಚಿನ ದಿನಗಳಲ್ಲಿ ಫ್ಯಾಟ್ ರಿಯಾಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆಗೆ ಅನೇಕ ನಟಿಯರು ಒಳಗಾಗುತ್ತಿದ್ದಾರೆ. ಅದರಲ್ಲೂ ನಟ ನಟಿಯರನ್ನು ಸೆಳೆಯಲು ಅಂಥದ್ದೊಂದು ತಂಡವೇ ಕಿರುತೆರೆಯಲ್ಲಿ ಇದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇಂತಹ ತಂಡದ ಮಾತಿಗೆ ಚೇತನಾ ರಾಜ್ ಬಲಿಯಾಗಿರಬಹುದಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಆದರೆ, ಚೇತನಾ ರಾಜ್ ಅವರ ಪಾಲಕರು ನೇರವಾಗಿಯೇ ವೈದ್ಯರ ನಿರ್ಲಕ್ಷ್ಯದ ಕುರಿತು ಮಾತನಾಡಿದ್ದಾರೆ. ತಮ್ಮ ಮಗಳ ಸಾವಿಗೆ ಆಸ್ಪತ್ರೆಯೇ ಕಾರಣವೆಂದು ದೂರು ಕೂಡ ದಾಖಲು ಮಾಡಿದ್ದಾರೆ.