ನವದೆಹಲಿ: ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಭಾರತ (India) ಮತ್ತು ಚೀನಾ (China) ಪಡೆಗಳ ಘರ್ಷಣೆ ಬಹುತೇಕ ಮುಗಿದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪ್ರತಿಮೆ ಅನಾವರಣಗೊಳಿಸಿದರು. ಪ್ರತಿಕೂಲ ಹವಾಮಾನದಿಂದಾಗಿ ತವಾಂಗ್ಗೆ ಅವರು ಪ್ರಯಾಣಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಸ್ಸಾಂನ ತೇಜ್ಪುರದಲ್ಲಿರುವ ಸೇನಾ ಪ್ರಧಾನ ಕಚೇರಿಯಿಂದ ಪ್ರತಿಮೆ ಅನಾವರಣಗೊಳಿಸಿದರು. ಈ ವೇಳೆ ಎಲ್ಎಸಿ ಉದ್ದಕ್ಕೂ ಇರುವ ಕೆಲವು ಪ್ರದೇಶಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಮಾತುಕತೆಯ ಪರಿಣಾಮವಾಗಿ ಎರಡೂ ದೇಶಗಳಲ್ಲೂ ಒಮ್ಮತ ಮೂಡಿದೆ. ಈ ಹೊಂದಾಣಿಕೆಯ ಆಧಾರದ ಮೇಲೆ ಗಸ್ತು ತಿರುಗುವ ಬಗ್ಗೆ ಇರುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅದಕ್ಕಾಗಿ ನಾವು ಸ್ವಲ್ಪ ಸಮಯ ಕಾಯಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.
1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ 560 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಏಕೀಕರಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರತಿಮೆಯು ಜನರಿಗೆ ಏಕತೆಯ ಶಕ್ತಿ ಮತ್ತು ರಾಷ್ಟ್ರವನ್ನು ನಿರ್ಮಿಸಲು ಅಗತ್ಯವಾದ ಅಚಲವಾದ ಮನೋಭಾವವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮೇಜರ್ ಬಾಬ್ ಖಥಿಂಗ್ ಅವರಿಗೆ ಗೌರವ ಸಲ್ಲಿಸಿ, ಅವರ ಈಶಾನ್ಯ ಪ್ರದೇಶ ಮತ್ತು ರಾಷ್ಟ್ರೀಯ ಭದ್ರತೆಗೆ ನೀಡಿದ ಕೊಡುಗೆಗಳನ್ನು ನೆನೆದರು. ಖಾಥಿಂಗ್ ಅವರು ಭಾರತದ ಜೊತೆ ತವಾಂಗ್ನ್ನು ಏಕೀಕರಣಕ್ಕೆ ಕಾರಣರಾದರು. ಇಷ್ಟೇ ಅಲ್ಲದೇ ಸಶಸ್ತ್ರ ಸೀಮಾ ಬಾಲ್, ನಾಗಾಲ್ಯಾಂಡ್ ಸಶಸ್ತ್ರ ಪೊಲೀಸ್ ಮತ್ತು ನಾಗಾ ರೆಜಿಮೆಂಟ್ ಸೇರಿದಂತೆ ಅಗತ್ಯ ಮಿಲಿಟರಿ ಭದ್ರತಾ ಪಡೆಗಳನ್ನು ಸ್ಥಾಪಿಸಿದರು. ಅವರ ಶೌರ್ಯ ಮತ್ತು ದೂರದೃಷ್ಟಿ, ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ.
2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯ ನಂತರ LAC ನಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಕಳೆದ ವಾರ ಗಸ್ತು ಒಪ್ಪಂದ ಮಾಡಿಕೊಂಡಿವೆ. ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಗೂ ಮೊದಲು ಈ ಒಪ್ಪಂದವನ್ನು ಘೋಷಿಸಲಾಗಿತ್ತು.