ಐದು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ ಕಾಶ್ಮೀರ್ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಕ್ಷಮೆ ಕೇಳಿದ್ದಾರೆ. 2018ರಲ್ಲಿ ವಿವೇಕ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ (Contempt of Court) ದಾಖಲಾಗಿತ್ತು. ಖುದ್ದಾಗಿ ಕೋರ್ಟಿಗೆ ಬಂದು ಕ್ಷಮೆ ಕೇಳಬೇಕು ಎಂದು ದೆಹಲಿ (Delhi) ಹೈಕೋರ್ಟ್ (High Court) ವಿವೇಕ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.
ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್.ಮುರಳೀಧರ್ ಅವರ ಕುರಿತು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತನಾಗಿದ್ದ ಗೌತಮ್ ನವ್ಲಾಖಾ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿದ್ದ ನ್ಯಾಯಾಧೀಶರ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದರು ವಿವೇಕ್. ಈ ಕುರಿತಂತೆ ವಿವೇಕ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಇತಿಶ್ರೀ ಹಾಡಲೆಂದೇ ವಿವೇಕ್ 2022ರ ಡಿಸೆಂಬರ್ ನಲ್ಲಿ ಕ್ಷಮೆಯಾಚಿಸಿದ್ದರು. ಆದರೆ, ದೆಹಲಿ ಹೈಕೋರ್ಟ್ ಖುದ್ದಾಗಿ ಬಂದು ಕ್ಷಮೆಯಾಚಿಸಬೇಕು ಎಂದು ಸೂಚಿಸಿತ್ತು. ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನೂ ನೀಡಿತ್ತು. ಹಾಗಾಗಿ ನಿನ್ನೆ ಖುದ್ದಾಗಿ ಕೋರ್ಟಿಗೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ.
ದಿ ಕಾಶ್ಮೀರ ಫೈಲ್ಸ್ ಸಿನಿಮಾ ಹಿಟ್ ಆದ ನಂತರ ಸೋಷಿಯಲ್ ಮೀಡಿಯಾದಲ್ಲಿ ಅನೇಕ ರೀತಿಯಲ್ಲಿ ವಿವೇಕ್ ಬರೆಯುತ್ತಿದ್ದಾರೆ. ಇವರ ಬರವಣಿಗೆ ಸಾಕಷ್ಟು ವಿವಾದಗಳನ್ನೂ ಹುಟ್ಟುಹಾಕಿವೆ. ಪ್ರಕಾಶ್ ರಾಜ್ ಸೇರಿದಂತೆ ಅನೇಕರು ವಿವೇಕ್ ಕುರಿತು ಟೀಕೆಗಳನ್ನು ಮಾಡಿದ್ದಾರೆ. ಮಾಡಿದ ಟೀಕೆಗಳಿಗೆ ಅವರೂ ಉತ್ತರವನ್ನು ನೀಡಿದ್ದಾರೆ.