ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿರುವ ಪ್ರಸಿದ್ಧ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿ ಕೊಕ್ಕರೆಗಳ ಸಾವಿಗೆ ಜಂತುಹುಳು ಕಾರಣ ಎಂದು ವರದಿ ಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಮೂರು ಹೆಜ್ಜಾರ್ಲೆ ಜಾತಿಯ ಕೊಕ್ಕರೆಗಳು ಅಸ್ವಸ್ಥಗೊಂಡು ಹಾರಲಾರದೇ ನೆಲಕ್ಕೆ ಬಿದ್ದಿದ್ದವು. ಇವುಗಳಿಗೆ ಚಿಕಿತ್ಸೆ ಕೊಡಿಸಿದರು, ಯಾವುದೇ ಪ್ರಯೋಜನವಾಗದೆ ಮೃತ ಪಟ್ಟಿದ್ದವು.
ಪಕ್ಷಿಗಳ ಸಾವಿನ ಹಿನ್ನೆಲೆಯಲ್ಲಿ ಹಕ್ಕಿಜ್ವರ ಸೋಂಕಿನಿಂದ ಕೊಕ್ಕರೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಪಶು ವೈದ್ಯರು ಮೃತಪಟ್ಟ ಕೊಕ್ಕರೆಗಳನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದರು. ಮೂರು ಕೊಕ್ಕರೆಗಳ ಪೈಕಿ ಎರಡು ಜಂತುಹುಳು ಸಮಸ್ಯೆಯಿಂದ ಸಾವನ್ನಪ್ಪಿರೋದು ಪರಿಶೀಲನೆ ವೇಳೆ ತಿಳಿದುಬಂದಿದೆ.
ಪಕ್ಷಿಗಳ ಸಾವಿನ ಕುರಿತು ವರದಿಯನ್ನು ಕಳುಹಿಸಲಾಗಿದೆ. ಆದರೆ ಮತ್ತೊಂದು ಕೊಕ್ಕರೆ ಸಾವಿನ ವರದಿ ಬರಬೇಕಿದೆ. ಸದ್ಯ ಬೆಳ್ಳೂರಿನಲ್ಲಿ ಯಾವುದೇ ಕೊಕ್ಕರೆ ಅಸ್ವಸ್ಥಗೊಂಡಿಲ್ಲ. ಮತ್ತೆ ಇದೇ ರೀತಿ ಪಕ್ಷಿಗಳು ಅಸ್ವಸ್ಥಗೊಂಡರೆ ಚಿಕಿತ್ಸೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ವೈದ್ಯರು ತಿಳಿಸಿದ್ದಾರೆ.