ಹಾವೇರಿ: ಮೂರು ವರ್ಷದ ಮಗಳ ಮುಂದೆಯೇ ದಂಪತಿ ನೇಣಿಗೆ ಶರಣಾದ ಘಟನೆ ಹಾವೇರಿ ತಾಲ್ಲೂಕಿನ ಬೆಳವಿಗಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಳವಿಗಿ ಗ್ರಾಮದ ಅಂಬೇಡ್ಕರ್ ನಗರದ ನಿವಾಸಿಗಳಾದ ಹನುಮಂತ ಹೊನ್ನಪ್ಪನವರ (32), ಹಾಗೂ ಸವಿತಾ ಹೊನ್ನಪ್ಪನವರ (26) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಗುರುವಾರ ರಾತ್ರಿ 3 ವರ್ಷದ ಮಗಳು ಚೇತನಾ ಜೋರಾಗಿ ಅಳುತ್ತಿರುವ ಧ್ವನಿ ಮನೆಯ ಅಕ್ಕಪಕ್ಕದವರಿಗೆ ಕೇಳಿಸಿದೆ. ಇದರಿಂದ ಎಚ್ಚೆತ್ತ ಅಕ್ಕಪಕ್ಕದ ಮನೆಯವರು ಹನುಮಂತ ಹೊನ್ನಪ್ಪನವರ ಮನೆಯ ಬಾಗಿಲು ಬಡಿದ್ದಾರೆ. ಆದರೆ, ಮಗು ಮಾತ್ರ ಅಳುತ್ತಿದ್ದಾಗ ಅನುಮಾನಗೊಂಡು ಮನೆಯ ಮೇಲ್ಛಾವಣಿಯ ಹಂಚು ತೆಗೆದು ನೋಡಿದಾಗ ಹನುಮಂತ ಹಾಗೂ ಸವಿತಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಾಣಿಸಿದ್ದಾರೆ. ಕೂಡಲೇ ಕೆಳಗಡೆ ಇಳಿದ ನೆರೆಹೊರೆಯವರು ಮಗವನ್ನು ಎತ್ತಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ನಮಗೆ ಯಾರ ಮೇಲೆಯೂ ಅನುಮಾನವಿಲ್ಲ. ಅಳಿಯ ಹಾಗೂ ಮಗಳ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಮೃತ ಸವಿತಾಳ ತಾಯಿ ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.