-ವೈರಲ್ ಪೇಪರ್ ತುಣುಕಿನ ರಹಸ್ಯ ರಿವೀಲ್
ಉಡುಪಿ: ಪ್ರಧಾನಿ ನರೇಂದ್ರ ಮೋದಿಯ ಕುಟುಂಬ ಮತ್ತು ಶಿಕ್ಷಣ ಸಾಕಷ್ಟು ಚರ್ಚೆಗೆ ಗ್ರಾಸವಾದ ವಿಚಾರ. ಪ್ರತಿಪಕ್ಷಗಳು ಇವತ್ತಿಗೂ ಈ ಎರಡು ವಿಚಾರವನ್ನಿಟ್ಟುಕೊಂಡು ಬಿಜೆಪಿ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಿದೆ. ಈ ನಡುವೆ ನರೇಂದ್ರ ಮೋದಿ ಇಂಜಿನಿಯರಿಂಗ್ ಪದವೀಧರರೇ..? ಅನ್ನೋ ಚರ್ಚೆಗೆ ಮರುಜೀವ ಬಂದಿದೆ.
ಮೋದಿ ಚಹಾ ಮಾರುತ್ತಿದ್ದರಂತೆ, ಮೋದಿ ಹಿಮಾಲಯದಲ್ಲಿ ನಾಲ್ಕು ವರ್ಷ ತಪಸ್ಸು ಮಾಡಿದ್ದರಂತೆ, ಮೋದಿ ಹಾಗೆ ಮಾಡಿದ್ರಂತೆ, ಮೋದಿ ಹೀಗೆ ಮಾಡಿದ್ರಂತೆ. ಪ್ರಧಾನಿ ನರೇಂದ್ರ ಮೋದಿಯ ಜೀವನದ ಸಾಕಷ್ಟು ವಿಷಯಗಳು ಚರ್ಚೆಯಲ್ಲಿದೆ. ಕೆಲವು ವಿಷಯಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ಇನ್ನು ಕೆಲವಕ್ಕೆ ಸಿಕ್ಕಿಲ್ಲ. ಈ ನಡುವೆ ಮೋದಿ ಇಂಜಿನಿಯರಿಂಗ್ ಪದವೀಧರ ಅನ್ನೋ ವಿಚಾರ ಚರ್ಚೆಗೆ ಬಂದಿದೆ.
ಈ ಇಂಜಿನಿಯರ್ ವಿಚಾರ ಚರ್ಚೆಗೆ ಬರಲು ಕಾರಣ ತರಂಗ ವಾರಪತ್ರಿಕೆಯ ವರದಿಯೊಂದರ ತುಣುಕು. 1992ರಲ್ಲಿ ಪ್ರಕಟವಾಗಿದ್ದ ಲೇಖನವೊಂದರಲ್ಲಿ ನರೇಂದ್ರ ಮೋದಿ ಉಡುಪಿಗೆ ಬಂದಿದ್ದರ ಬಗ್ಗೆ ಮಾಹಿತಿಗಳಿವೆ. ಈ ಸಂದರ್ಭ ತರಂಗದ ವರದಿಗಾರರು ಮೋದಿ ಅವರ ಸಂದರ್ಶನ ಮಾಡಿದ್ದಾರೆ. ಆರ್ ಎಸ್ಎಸ್ ನ ಸೌರಾಷ್ಟ್ರದ ಕಾರ್ಯಾವಾಹಕ, ಸಂಘಟನಾ ಚತುರ, ಇಂಜಿನಿಯರ್ ಪದವೀಧರ, ಅವಿವಾಹಿತ ಅಂತ ಉಲ್ಲೇಖ ಮಾಡಿದ್ದಾರೆ.
2019ರ ಲೋಕಸಮರ ಸಂದರ್ಭ ಈ ಪೇಪರ್ ಕಟ್ಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ಇದರ ಸತ್ಯಾಸತ್ಯತೆ ಹುಡುಕಲು ಹೋದ ಪಬ್ಲಿಕ್ ಟಿವಿಗೆ ಕೆಲವಷ್ಟು ಮಾಹಿತಿಗಳು ಸಿಕ್ಕಿದೆ. ನರೇಂದ್ರ ಮೋದಿ ಇಂಜಿನಿಯರ್ ಪದವೀಧರರಲ್ಲ. ಇದು ಪ್ರಮಾದದಿಂದಾದ ವರದಿ ಎಂಬುದನ್ನು ಮೋದಿ ಜೊತೆಗಿದ್ದ ಉಡುಪಿ ನಗರಸಭೆಯ ಆಗಿನ ಅಧ್ಯಕ್ಷ ಗುಜ್ವಾಡಿ ಪ್ರಭಾಕರ ನಾಯಕ್ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 1992ರಲ್ಲಿ ಉಡುಪಿಗೆ ಬಂದದ್ದು ಹೌದು. ಎಲ್.ಕೆ. ಅಡ್ವಾಣಿಯವರ ರಥಯಾತ್ರೆಯ ಉಸ್ತುವಾರಿಯನ್ನು ಮೋದಿಯವರು ನೋಡಿಕೊಂಡಿದ್ದರು. ಯಾತ್ರೆಯ ರೂಪುರೇಷೆಯ ಸಭೆ ಆದದ್ದು ಗೃಹಸಚಿವರಾಗಿದ್ದ, ದಿವಂಗತ ವಿಎಸ್ ಆಚಾರ್ಯರ ಮನೆಯಲ್ಲಿ. ಅಲ್ಲೇ ಈ ಫೋಟೋ ಕ್ಲಿಕ್ ಆಗಿದ್ದು. ಮೋದಿಯವರ ಸಂದರ್ಶನ ಮಾಡುತ್ತಿರುವಾಗ ಅವರ ಜೊತೆಗೆ ಎಂಜಿನಿಯರ್ ಒಬ್ಬರಿದ್ದರು. ಅವರ ಕ್ವಾಲಿಫಿಕೇಶನ್ ಮೋದಿ ಹೆಸರಿನ ಮುಂದೆ ಬಿದ್ದಿದ್ದಂತೆ. ಆದ್ರೆ ಸಂದರ್ಶನ ಮಾತ್ರ ಡಾ. ವಿಎಸ್ ಆಚಾರ್ಯ ಮನೆ ಮುಂದೆ ನಡೆದಿತ್ತು. ಇದನ್ನು ವಿಎಸ್ ಆಚಾರ್ಯ ಪತ್ನಿ ಶಾಂತಾ ಆಚಾರ್ಯ ಕೂಡಾ ಒಪ್ಪಿಕೊಳ್ಳುತ್ತಾರೆ. ಆ ಫೋಟೋ ಅವರ ಬಳಿಯೂ ಇದೆ.
ಮೋದಿ ರಾಜ್ಯ ಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ ಅಂತ ಗೂಗಲ್ ಹೇಳುತ್ತಿದೆ. ಅವರ ನಾಮಪತ್ರದಲ್ಲೂ ಉಲ್ಲೇಖವಿದೆ. ವರದಿಯ ತುಣುಕನ್ನು ಮೋದಿ ವಿರೋಧಿಗಳು ಗೇಲಿ ಮಾಡಲು- ಟೀಕಿಸಲು ಬಳಸುತ್ತಿದ್ದಾರೆ.