ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶ್ರೀಗಳು ಧರ್ಮಾಭಿಮಾನದ ಜೊತೆಗೆ ಕನ್ನಡದ ಮೇಲೆ ಅಪಾರ ಕಾಳಜಿ ಹೊಂದಿರುವ ಕನ್ನಡದ ವಿಶೇಷ ಮಠಾಧೀಶರು. ಕನ್ನಡದ ಗಡಿ, ಭಾಷೆಗೆ ಅನ್ಯಾಯವಾದಾಗ ಅದನ್ನು ಹಲವು ಬಾರಿ ಪ್ರತಿಭಟಿಸಿದ್ದಾರೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರಶಂಸಿದರು.
ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹಿರೇಮಠದ ಕಾರ್ಯ ಶ್ಲಾಘನೀಯವಾದದ್ದು. ಕನ್ನಡದ ಮೇಲಿನ ಇಂತಹ ಕಾಳಜಿ ಎಲ್ಲ ಮಠಾಧೀಶರಲ್ಲೂ ಬರಬೇಕು. ಗಡಿಯಲ್ಲಿ ಕನ್ನಡದ ಉಳಿವಿಗಾಗಿ ನಾವೆಲ್ಲರೂ ಆಸಕ್ತಿಯಿಂದ, ಹೊಂದಾಣಿಕೆಯಿಂದ ನಡೆದಾಗ ಮಾತ್ರ ಗಡಿಭಾಗ ಅಭಿವೃದ್ಧಿಯಾಗಲು ಸಾಧ್ಯ ಎಂದರು. ಇದನ್ನೂ ಓದಿ: ಕೋವಿಡ್ ಸಂಗ್ರಾಮದಲ್ಲಿ ಮಾಸ್ಕ್ ಧಾರಣೆಗೆ ಹೆಚ್ಚಿನ ಮಹತ್ವ: ಸಚಿವ ಅಂಗಾರ
ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಈ ವೇಳೆ ಮಾತನಾಡಿ, ಗಡಿಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್ ಅವರು ಧರ್ಮ, ದೇವರು, ಆಧ್ಯಾತ್ಮಿಕ ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದ್ದಾರೆ. ಅವರು ಪ್ರಾಧಿಕಾರದ ಅಧ್ಯಕ್ಷರಾದಾಗಿನಿಂದಲು ಕಾಲಿಗೆ ಚಕ್ರ ಕಟ್ಟಿಕೊಂಡು ಗಡಿಯುದ್ದಕ್ಕೂ ಸಂಚರಿಸಿ ಕುಂದು, ಕೊರತೆಗಳನ್ನು ಆಲಿಸುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ಬಳಿಕ ಶ್ರೀಗಳು ಗಡಿ ಅಭಿವೃದ್ಧಿ ಪ್ರಧಿಕಾರ ಅಧ್ಯಕ್ಷರನ್ನು ಸತ್ಕರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಗಡಿ ಅಭಿವೃದ್ಧಿ ಪ್ರದೇಶ ಪ್ರಾಧಿಕಾರದ ಕಾರ್ಯದರ್ಶಿಯಾದ ಪ್ರಕಾಶ್ ಮತ್ತು ಮತ್ತಿಹಳ್ಳಿ, ಆಪ್ತ ಕಾರ್ಯದರ್ಶಿ ಸೋಮಶೇಖರ್ ಗಾಂಜಿ ಹಾಗೂ ಹಿರೇಮಠದ ವೇದಪಟು ಸಂಪತಕುಮಾರ್ ಶಾಸ್ತ್ರೀ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಂಗ್ರೆಸ್ಸಿನ ಸರ್ವನಾಶಕ್ಕೆ ಅವರೇ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ: ಪ್ರತಾಪ್ ಸಿಂಹ