ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಅಧಿಕೃತ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ. ಈ ಕುರಿತು ಇಂದೇ ಆದೇಶ ಹೊರಬೀಳಲಿದೆ. 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೌಕರರ ವೇತನ ಶೇಕಡಾ 30ರಷ್ಟು ಹೆಚ್ಚಳವಾಗಲಿದೆ. ಶನಿವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಘಟನೋತ್ತರ ಮಂಜೂರಾತಿ ಸಿಗಲಿದೆ.
ವರದಿಯಲ್ಲಿ ಏನು ಇರಬಹುದು?
1. 6 ನೇ ವೇತನ ಆಯೋಗದ ಸಂಭವನೀಯ ವರದಿಯಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು. ನೌಕರರಿಗೆ ವಾರಕ್ಕೆ ಎರಡು ರಜೆ, ಕೆಲ ಜಯಂತಿಗಳಿಗೆ ಇರುವ ರಜೆಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ.
2. ಈ ಬಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಾಧ್ಯತೆ ಇದೆ. ಅಂದರೆ ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ ನಿಗದಿಯಾಗುವ ಸಾಧ್ಯತೆ ಇದ್ದು, ಕನಿಷ್ಠ ಮೂಲ ವೇತನ 16,350 ರೂ. ಮತ್ತು ಗರಿಷ್ಠ ಮೂಲ ವೇತನ 1,32,925 ರೂ. ನಿಗದಿಯಾಗಬಹುದು.
3. ಐಎಎಸ್ ಅಲ್ಲದ ಅಧಿಕಾರಿಗಳಿಗೆ 95,325 ರೂ., ಗ್ರೂಪ್ ಎ ನೌಕರರಿಗೆ 48,625 ರೂ., ಗ್ರೂಪ್ ಬಿ ನೌಕರರಿಗೆ 39,425 ರೂ., ಎಫ್ಡಿಎ ನೌಕರರಿಗೆ 28,125 ರೂ., ಸಿ ಗ್ರೂಪ್ ನೌಕರರಿಗೆ 19,850 ರೂ., ಮತ್ತು ಡಿ ಗ್ರೂಪ್ ನೌಕರರಿಗೆ 16,350 ರೂ. ಎಂದು ಮೂಲ ಸಂಬಳ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.