ತುಮಕೂರು: ತುಂಗಭದ್ರಾ ಡ್ಯಾಂ ಗೇಟ್ ಮುರಿದಿರೋದು ಸರ್ಕಾರಕ್ಕೊಂದು ಅಪಶಕುನದ ಮುನ್ಸೂಚನೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ (Govind Karjol) ಹೇಳಿಕೆ ನೀಡಿದ್ದಾರೆ.
ತುಂಗಭದ್ರಾ ಡ್ಯಾಂ ಗೇಟ್ ಮುರಿದಿರೋದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಅಪಶಕುನ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರಿ ಇಲ್ಲ. ರಾಜ್ಯದ ಆಡಳಿತ ಸರಿಯಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದಿದ್ದಾರೆ. ಇದನ್ನೂ ಓದಿ: ವಯನಾಡು ಭೂಕುಸಿತ ದುರಂತ: 25 ಲಕ್ಷ ದೇಣಿಗೆ ನೀಡಿದ ಧನುಷ್
ಸರ್ಕಾರ ಮೊದಲು ನೀರಾವರಿ ಸಚಿವರನ್ನು ನೇಮಕ ಮಾಡಬೇಕು. ಅವರು ಆಡಳಿತಕ್ಕಿಂತ ಹೆಚ್ಚು ರಾಜಕಾರಣಕ್ಕೆ ಹೆಚ್ಚು ಒತ್ತು ಕೊಡುವ ಸ್ಥಿತಿಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅವರು ಚುನಾವಣೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ. ಹೀಗಾಗಿ ನೀರಾವರಿ ಇಲಾಖೆ ಅನಾಥವಾಗಿದೆ ಎಂದು ಗೋವಿಂದ ಕಾರಜೋಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೀರಾವರಿ ಇಲಾಖೆಗೆ ಪೂರ್ಣವಧಿ ಸಚಿವರನ್ನು ನೇಮಕ ಮಾಡಲಿ. ನಾನು ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡ್ತೇನೆ. 3 ರಾಜ್ಯಗಳ ಸುಮಾರು 15 ಲಕ್ಷ ಎಕರೆಗೆ ಆಗುವಷ್ಟು ನೀರು ವ್ಯರ್ಥವಾಗಿ ಆಂಧ್ರ, ತೆಲಂಗಾಣ ಪಾಲಾಗ್ತಿದೆ. ನಮ್ಮ ರೈತರು ಕಣ್ಣೀರು ಹಾಕುವಂತಹ ಪರಿಸ್ಥಿತಿ ಈಗ ಬಂದಿದೆ. ಸರಿಯಾಗಿ ನಿಭಾಯಿಸದೇ ಇರೋದೇ ಗೇಟ್ ಮುರಿಯೋದಕ್ಕೆ ಮೂಲ ಕಾರಣವಾಗಿದೆ. ಡ್ಯಾಂ ಸೇಫ್ಟಿ ಮತ್ತು ಕಮಿಟಿ ವರದಿ ನೋಡಿದರೆ, ನೀರಾವರಿ ಇಲಾಖೆ ಅಧಿಕಾರಿಗಳು 100%, 33 ಗೇಟ್ಗಳನ್ನ ಸಮರ್ಪಕವಾಗಿ ನಿಭಾಯಿಸಬೇಕು ಎಂದಿದ್ದಾರೆ.
ಸರಿಯಾದ ವ್ಯವಸ್ಥೆ ಮಾಡದೇ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ರಾಜ್ಯದಲ್ಲಿ ಜನರಿಗೆ ನ್ಯಾಯ ಸಿಗುತ್ತಿಲ್ಲ. ಜನರ ಕಣ್ಣೀರಿನ ಶಾಪ ಸಿದ್ದರಾಮಯ್ಯರ ಸರ್ಕಾರಕ್ಕೆ ತಟ್ಟಲಿದೆ. ಕಣ್ಣೀರಿನಲ್ಲೇ ಸಿದ್ದರಾಮಯ್ಯ (CM Siddaramaiah) ಸರ್ಕಾರ ಕೊಚ್ಚಿ ಹೋಗುವ ಕಾಲ ಬಂದಿದೆ ಎಂದು ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.