ಕೊಪ್ಪಳ: ಬಡ ಕುಟುಂಬದ ಅಭಿಮಾನಕ್ಕೆ ಸೋತಿದ್ದ ಅಪ್ಪು, ಅವರನ್ನು ಭೇಟಿ ಮಾಡಿ ಕುಟುಂಬದ ಮೂವರಿಗೆ ಕಣ್ಣಿಲ್ಲ ಎಂದು ಗೊತ್ತಾಗಿ ಮರುಗಿದ್ದರು. ಅದಕ್ಕೆ ಅವರಿಗೆ ದೃಷ್ಟಿ ಕೊಡಿಸುವುದಾಗಿ ಭರವಸೆ ನೀಡಿದ್ರು. ಈ ಹಿನ್ನೆಲೆ ಒಂದು ವರ್ಷದಿಂದ ಪುನೀತ್ ಆಗಮನಕ್ಕೆ ಕಾದಿದ್ದ ಆ ಅಂಧ ಸಹೋದರಿಯರು ಈಗ ಕಂಗಾಲಾಗಿದ್ದಾರೆ.
ಪುನೀತ್ ಸಾವು ಅರಗಿಸಿಕೊಳ್ಳದೇ ಕರ್ನಾಟಕದ ಲಕ್ಷಾಂತರ ಅಭಿಮಾನಿಗಳು ಅಳುತ್ತಿದ್ದಾರೆ. ಆದರೆ ಈ ಸಹೋದರಿಯರ ನೋವಿನ ಹಿಂದಿನ ಕಥೆಯೇ ಬೇರೆ ಇದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮಲ್ಲಪೂರ ಗ್ರಾಮದ ಹನುಮಂತಪ್ಪ ಹೊಸಳ್ಳಿ ಅವರ ಇಡೀ ಕುಟುಂಬ ಡಾ.ರಾಜ್ಕುಮಾರ್ ಅವರ ಕಟ್ಟಾ ಅಭಿಮಾನಿಗಳಾಗಿದ್ದಾರೆ. ಹನುಮಂತಪ್ಪನ ಐವರು ಮಕ್ಕಳ ಪೈಕಿ ಮೂವರು ಹುಟ್ಟು ಕುರುಡರು. ಕುರುಡರ ಅಂದಾಭಿಮಾನಕ್ಕೆ ಮೆಚ್ಚಿದ್ದ ಪುನೀತ್ ರಾಜ್ಕುಮಾರ್, ಇವರ ಸ್ವಗ್ರಾಮದ ಬಳಿ ಚಿತ್ರೀಕರಣಕ್ಕೆ ಬಂದಾಗ ಕಣ್ಣಿಲ್ಲದ ಪ್ರಮೀಳಾ, ರೇಣುಕಾ ಮತ್ತು ಶಾರದಮ್ಮರನ್ನು ಚಿತ್ರೀಕರಣದ ಸ್ಥಳಕ್ಕೆ ಕರೆಸಿಕೊಂಡು ಮಾತನಾಡಿಸಿದ್ದರು. ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ
ಆಗ ಈ ಕುಟುಂಬದ ಮೂವರಿಗೆ ಕಣ್ಣಿಲ್ಲ ಎಂಬುದು ಗೊತ್ತಾಗಿ ಮರಗಿದ ಅಪ್ಪು ಇವರಿಗೆ ಕಣ್ಣು ಕೊಡಿಸುವ ಭರವಸೆ ನೀಡುವುದಾಗಿ ಹೇಳಿದ್ದರಂತೆ. ಅಂದಿನಿಂದ ತಮಗೆ ಅಪ್ಪು ಕಣ್ಣು ಕೊಡಿಸ್ತಾರೆ ಎಂಬ ನಿರೀಕ್ಷೆಯಲ್ಲೇ ಇದ್ದ ಈ ಕುಟುಂಬ ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಕಳೆದ ವರ್ಷ 2020ರ ಅಕ್ಟೋಬರ್ ನಲ್ಲಿ ಅಂಜನಾದ್ರಿ ಸುತ್ತಮುತ್ತ ಅಪ್ಪು ಅವರ ‘ಜೇಮ್ಸ್’ ಚಿತ್ರದ ಶೂಟಿಂಗ್ ನಡೆದಿತ್ತು. ಈ ವೇಳೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದ ಅಪ್ಪು, ಒಂದೇ ಕುಟುಂಬದ ಈ ಮೂವರು ಅಂಧ ಸಹೋದರಿಯರ ಜೊತೆ ಊಟ ಮಾಡಿ ಇವರ ಆಸೆ ಈಡೇರಿಸಿದ್ದರು.
ಜೊತೆಗೆ ಇವರು ಹುಟ್ಟು ಕುರುಡರು ಎಂದು ಗೊತ್ತಾಗಿ ಭಾವುಕರಾದ ಅಪ್ಪು, ಅವರ ಜೊತೆ ಊಟ ಮಾಡಿದ್ದರು. ಅಷ್ಟೇ ಅಲ್ಲದೇ ಈ ಮೂವರಿಗೂ ಕಣ್ಣು ಕೊಡಿಸುವ ಜೊತೆಗೆ, ಆರ್ಥಿಕ ಸಹಾಯ ಮಾಡಿ ಬದುಕು ಕಟ್ಟಿ ಕೊಡುವ ಭರವಸೆ ನೀಡಿದ್ದಾರೆ. ಇದರಿಂದ ಕಳೆದ 1 ವರ್ಷದಿಂದ ಅಪ್ಪು ಬರುವಿಕೆಗಾಗಿ ಕಾಲ ಕಳೆಯುತ್ತಿರುವ ಈ ಕುಟುಂಬಕ್ಕೆ ಅವರ ಸಾವು ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು
ಪುನೀತ್ ಭೇಟಿ ಮಾಡಿದ ಸಹೋದರಿಯರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಮಾತ್ರ ತಮಗೆ ಮತ್ತಾರು ಕಣ್ಣು ಕೊಡಬಲ್ಲರು ಎಂಬ ನೋವಿನಲ್ಲೇ ಕಾಲ ಕಳೆಯುತ್ತಿದ್ದು, ಇದು ವಿಪರ್ಯಾಸವಾಗಿದೆ.