ತಿರುನಂತಪುರಂ: ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇರಳದ ವಯನಾಡು ಕ್ಷೇತ್ರದಲ್ಲಿ (Wayanad Constituecy) ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿ (Priyanka Gandhi), ಕೇರಳ ಕಾಂಗ್ರೆಸ್ ನಾಯಕರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ.
ಇಲ್ಲಿನ ಕಾಲ್ಪೆಟ್ಟಾ ಪಟ್ಟಣದಲ್ಲಿ ʻಸತ್ಯಮೇವ ಜಯತೆʼ ರೋಡ್ ಶೋ (Rahul Gandhi RoadShow) ನಡೆಸಿದ ರಾಹುಲ್ ಗಾಂಧಿ, ಬಳಿಕ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ
ಸಂಸದ ಎಂಬುದು ಕೇವಲ ಒಂದು ಟ್ಯಾಗ್, ಒಂದು ಸ್ಥಾನ, ಹುದ್ದೆ ಅಷ್ಟೇ. ಬಿಜೆಪಿಯವರು ಆ ಟ್ಯಾಗ್ ಅನ್ನು ಕಿತ್ತುಕೊಳ್ಳಬಹುದು, ಮನೆಯನ್ನ ಕಸಿದುಕೊಳ್ಳಬಹುದು ಅಥವಾ ನನ್ನನ್ನ ಜೈಲಿಗೂ ಹಾಕಿಸಬಹುದು. ಆದರೆ ವಯನಾಡಿನ ಜನರನ್ನ ಪ್ರತಿನಿಧಿಸೋದನ್ನ ತಡೆಯೋಕೆ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ನಾನು ಹಲವು ವರ್ಷಗಳಿಂದ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ, ಇಷ್ಟು ವರ್ಷಗಳಾದರೂ ಅವರು ತಮ್ಮ ಎದುರಾಳಿಯನ್ನ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು, ನಾನು ಅವರಿಗೆ ಹೆದರುವುದಿಲ್ಲ ಎಂಬುದನ್ನ ಅರ್ಥಮಾಡಿಕೊಳ್ಳದೇ ಇರೋದು ನನಗೆ ಆಶ್ಚರ್ಯ ಎನಿಸಿದೆ. ಇದನ್ನೂ ಓದಿ: 300ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ – ಅಮಿತ್ ಶಾ
ವಯನಾಡಿನಲ್ಲಿ ಪ್ರವಾಹ ಬಂದಾಗ ನೂರಾರು ಜನರು ತಮ್ಮ ಮನೆಗಳನ್ನ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿಯವರು ಹೇಗೆ ಸ್ಪಂದಿಸಿದ್ದೀರಿ ಎಂಬುದನ್ನ ನೋಡಿದ್ದೇನೆ. ನೀವು ನನ್ನ ಮನೆ ಕಸಿದುಕೊಂಡಿದ್ದರ ಬಗ್ಗೆ ನನಗೆ ಚಿಂತೆಯಿಲ್ಲ. ಆದ್ರೆ ಭಾರತದ ವಯನಾಡಿನ ಸಮಸ್ಯೆ ಎತ್ತುವುದನ್ನು ನಾನು ಮುಂದುವರಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಕೇರಳ ಜನರ ಕುರಿತು ಮಾತನಾಡುತ್ತಾ, ನಾನು ಕೇರಳಕ್ಕೆ ಸೇರಿದವನಲ್ಲ. ಆದರೂ ನನ್ನನ್ನು ಅಪ್ಪಿಕೊಂಡು ಪ್ರೀತಿ, ವಾತ್ಸಲ್ಯ ತೋರಿಸಿದ ರೀತಿ ಮರೆಯಲು ಸಾಧ್ಯವಿಲ್ಲ. ನನ್ನನ್ನ ನಿಮ್ಮ ಮಗ, ಸಹೋದರ ಎನ್ನುವಂತೆ ಭಾವಿಸಿದಿರಿ. ಈ ಪ್ರೀತಿ ವಿಶ್ವಾಸ ಇದ್ದಿದ್ದರಿಂದಲೇ 4 ವರ್ಷಗಳ ಹಿಂದೆ ನಾನಿಲ್ಲಿಗೆ ಬಂದು ನಿಮ್ಮ ಸಂಸದನಾದೆ ಎಂದು ಭಾವುಕರಾದರು.
ಬಿಜೆಪಿ ದೇಶದ ಜನರನ್ನ ವಿಭಜಿಸುತ್ತೆ, ಜನರಲ್ಲಿ ಕಲಹ ಸೃಷ್ಟಿಸುತ್ತೆ. ಆದ್ರೆ ನಾನು ಜನರನ್ನ ಒಗ್ಗೂಡಿಸುತ್ತಲೇ ಇರುತ್ತೇನೆ. ಪ್ರತಿಯೊಂದು ಧರ್ಮ, ಸಮುದಾಯ ಹಾಗೂ ವಿಚಾರವನ್ನ ನಾನು ಗೌರವಿಸುತ್ತೇನೆ. ಯಾರು ಎಷ್ಟೇ ದುಷ್ಟರಾದರೂ ನಾನು ನನ್ನಿಂದ ಸಾಧ್ಯವಾದಷ್ಟು ಪ್ರೀತಿ ತೋರುತ್ತೇನೆ ಏಕೆಂದರೆ ಇದು ಭಾರತ ಎಂದು ನುಡಿದಿದ್ದಾರೆ.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ರಾಹುಲ್ಗಾಂಧಿ ʻಮೋದಿʼ ಉಪನಾಮ ಬಳಸಿ ವಾಗ್ದಾಳಿ ನಡೆಸಿದ್ದರು. ಈ ವಿಚಾರದಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿದ್ದರಿಂದ ರಾಹುಲ್ ಗಾಂಧಿ ಅವರನ್ನ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.