ಮೈಸೂರು: ಹುಣಸೂರಿನ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೆಸರನ್ನೇ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಪಿ.ಮಂಜುನಾಥ್ ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರೂ ಸೇರಿ ಪ್ರತಾಪ್ ಅವರನ್ನು ಸಿಂಹ ಮಾಡಿಬಿಟ್ಟಿದ್ದಾರೆ. ಆದ್ರೆ ಅವರು ಪೇಪರ್ನ ಸಿಂಹ. ಅವರ ನಡವಳಿಕೆ ಜನರ ಮನಸಲ್ಲಿ ವಿಷತುಂಬಿಸುವ ಕೆಲಸ ಮಾಡುತ್ತೆ. ಆದ್ದರಿಂದ ಅವರು ಪ್ರತಾಪ್ ತಿಮ್ಮ. ಎಲ್ಲರು ಜನರಲ್ಲಿ ಪ್ರೀತಿ ವಿಶ್ವಾಸ ಮೂಡಿಸಬೇಕು. ಐದು ವರ್ಷಗಳ ಹಿಂದೆ ಪ್ರತಾಪ್ ಸಿಂಹ ಸಂಸದರಾಗಿ ಬಂದರು. ಆಗಿನಿಂದ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಅವರ ಈ ಅವಧಿಯಲ್ಲಿ ಅವರ ಸಾಧನೆ ಏನು? ಶಾಂತಿಯುತವಾಗಿದ್ದ ಹುಣಸೂರನ್ನು ಮತ್ತೊಂದು ಮಂಗಳೂರು ಮಾಡಿದ್ದಾರೆ. ನೆಮ್ಮದಿಯಾಗಿ ಬದುಕುವ ವಾತಾವರಣ ಹಾಳು ಮಾಡಿದ್ದಾರೆ. ಈಗ ಚುನಾವಣೆ ಬಂದಿದೆ. ಸಿ.ಎಚ್.ವಿಜಯ ಶಂಕರ್ ಪುಣ್ಯ ಅನ್ನಿಸುತ್ತೆ ಜೆಡಿಎಸ್- ಕಾಂಗ್ರೆಸ್ ನಾಯಕರು ಒಟ್ಟಾಗಿದ್ದಾರೆ. ಕಿತ್ತಾಡುತ್ತಿದ್ದ ಸಿದ್ದರಾಮಯ್ಯ- ಜಿ.ಟಿ.ದೇವೇಗೌಡ ಅವರೇ ಒಂದಾಗಿದ್ದಾರೆ. ಇನ್ನು ನಾವು, ನೀವು ಒಂದಾಗುವುದರಲ್ಲಿ ಏನಿದೆ? ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕೆ ಇಳಿಯುವುದರಲ್ಲಿ ಹಿಂದೆ ಇದ್ದಾರೆ. ಅದೊಂದು ಬಿಟ್ಟರೆ ಉಳಿದೆಲ್ಲ ವಿಚಾರಗಳಲ್ಲೂ ನಾವು ಮುಂದೆ ಇದ್ದೇವೆ ಎಂದು ತಿಳಿಸಿದರು.