20ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿಯ ಕೊಲೆ – 6 ಮಂದಿ ಅರೆಸ್ಟ್‌

Public TV
3 Min Read
Chitradurga lovers 1

ಚಿತ್ರದುರ್ಗ: ಆತ ಮದ್ವೆಯಾಗಿ (Marriage) ಸುಖಿ ಸಂಸಾರ ನಡೆಸಬೇಕೆಂಬ ಕನಸು ಕಂಡವನು. ಆದ್ರೆ ಎರಡು ಮದ್ವೆಯಾದ್ರೂ ಪತ್ನಿಯರೊಂದಿಗೆ ಸಂಸಾರ ಮಾಡುವ ಭಾಗ್ಯ ಮಾತ್ರ ಸಿಗಲಾರದೇ ಕೊಲೆಯಾಗಿದ್ದಾನೆ. ಚಿತ್ರದುರ್ಗ (Chitradurga) ತಾಲ್ಲೂಕಿನ ಕೋಣನೂರು ಗ್ರಾಮದ ಮಂಜುನಾಥ (40)ನೇ ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣ ಸಂಬಂಧ ಭರಮಸಾಗರ ಠಾಣೆ ಪೊಲೀಸರು 6 ಆರೋಪಿಗಳನ್ನ ಬಂಧಿಸಿದ್ದಾರೆ.

ಕಾವ್ಯ, ದಿವ್ಯ, ಶಂಕರಮ್ಮ, ಬಸವರಾಜ, ಪ್ರಸನ್ನ, ಹರ್ಷ ಬಂಧಿತ ಆರೋಪಿಗಳು. ಒಟ್ಟಾರೆ ಓಈ ಪ್ರಕರಣದಲ್ಲಿ 20 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ್‌ ಪೋಷಕರಿಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದರೆ.  ಮಂಜುನಾಥ ಕೊಲೆಯಾಗುತ್ತಿದ್ದಂತೆ ಯುವತಿಯೊಂದಿಗೆ ನಡೆಸಿದ ಆಡಿಯೋ ಸಂಭಾಷಣೆ ವೈರಲ್‌ ಆಗಿದೆ. ಇದನ್ನೂ ಓದಿ: ನವಜಾತ ಶಿಶುಗಳ ಮರಣ ಪ್ರಮಾಣ ಏರಿಕೆ – ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸಚಿವರ ಖಡಕ್ ಸೂಚನೆ

Chitradurga lovers 2 1

ಈತನು ಕಳೆದ ಐದು ವರ್ಷಗಳ ಹಿಂದೆ ಮಡಿವಾಳ ಜನಾಂಗದ ಶಿಲ್ಪ ಎಂಬ ಯುವತಿಯನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಆಕೆಯನ್ನು ವಂಚಿಸಿದ್ದನು. ಆಗ ಮನನೊಂದ ಶಿಲ್ಪ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಆ ಕೇಸಲ್ಲಿ ಜೈಲು ಸೇರಿದ್ದ ಮಂಜುನಾಥನು (ಲಿಂಗಾಯತ) ಸ್ವಜಾತಿಯ ಮತ್ತೋರ್ವ ಯುವತಿಯನ್ನು ಪ್ರೀತಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ನಾಯಕನಹಟ್ಟಿಯ ಹೊಸಗುಡ್ಡದದೇಗುಲದಲ್ಲಿ ಮದ್ವೆಯಾಗಿದ್ದನು. ಆದ್ರೆ ಇವರಿಬ್ಬರ ಮದ್ಯೆ ತೀವ್ರ ವಯಸ್ಸಿನ ಅಂತರವಿದ್ದು, ಜೈಲಿಂದ ಬಂದಿದ್ದ ಮಂಜುನಾಥನಿಗೆ ತಮ್ಮ ಮಗಳನ್ಮು ವಿವಾಹ ಮಾಡಿಕೊಡಲು ಒಪ್ಪದ (ರಕ್ಷಿತಾ 20) ಕುಟುಂಬಸ್ಥರು ರಾಜಿಪಂಚಾಯ್ತಿಗೆ ಮುಂದಾಗಿದ್ದು, ಶೀಘ್ರದಲ್ಲೇ ಎಲ್ಲರ ಸಮ್ಮುಖದಲ್ಲಿ ಮದ್ವೆ ಮಾಡಿಕೊಡುವುದಾಗಿ ನಂಬಿಸಿ, ಯುವತಿಯನ್ನು ಮನೆಗೆ ಕರೆದೊಯ್ದಿದ್ದರು. ಸಂಬಂಧಿಕರ ಊರಲ್ಲಿದ್ದ ಮಂಜುನಾಥ್‌ ಬುಧವಾರ ಗ್ರಾಮಕ್ಕೆ ಆಗಮಿಸಿದ್ದನು. ಈ ವೇಳೆ ಹುಡುಗಿಯ ಸಂಬಂಧಿಕರು ಸೇರಿದ 20 ಜನರ ಗುಂಪು ಏಕಾಎಕಿ ದಾಳಿ ನಡೆಸಿದೆ. ಕೋಲು, ಕಣಿಗೆ, ಮತ್ತು ರಾಡಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ವೇಳೆ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನಸೂಯ ಮೇಲೂ ಹಲ್ಲೆಯಾಗಿದೆ.

Chitradurga lovers 3

ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ಘಟನಾ ಸ್ಥಳ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇದೀಗ ಮಂಜುನಾಥ್‌ ಸಾವಿನ ಬಳಿಕ ಯುವತಿಯೊಂದಿಗೆ ಮಾತನಾಡಿದ ಆಡಿಯೋ ಸಂಭಾಷಣೆ ವೈರಲ್‌ ಆಗಿದೆ. ಇದನ್ನೂ ಓದಿ: ಆರ್ಥಿಕ ಸಮಸ್ಯೆಯಿಂದ 40,000ಕ್ಕೆ 4 ವರ್ಷದ ಹೆಣ್ಣುಮಗು ಮಾರಾಟ – ಪೋಷಕರು ಸೇರಿ 6 ಮಂದಿ ಅರೆಸ್ಟ್‌

ಆಡಿಯೋ ರಹಸ್ಯ ಏನು?

ರಕ್ಷಿತಾ: ನನಗೆ ನೀನು ಬೇಕು
ಮಂಜುನಾಥ್: ನಾನು ನಿನಗೆ ಸಿಗಲ್ಲ
ರಕ್ಷಿತಾ: ಯಾರೂ ನನಗೆ ಬೇಡ, ನನಗೆ ನೀನು ಬೇಕು
ಮಂಜುನಾಥ್: ಆಯ್ತು ಏನ್ ಮಾಡಲಿ…?
ರಕ್ಷಿತಾ: ನಿನ್ನ ಬಿಟ್ಟು ಒಂದು ಕ್ಷಣ ಇರೋಕೆ ಆಗಲ್ಲ…
ಮಂಜುನಾಥ್: ನಾನ್ ಮಾಡಿರೋದೆಲ್ಲಾ ನಿನಗೆ ಗೊತ್ತಿದ್ರು ನಾನೇ ಬೇಕು ಅಂತಿಯಲ್ಲ
ರಕ್ಷಿತಾ: ನನ್ನನ್ನು ಕರ್ಕೊಂಡ್ ಹೋಗು ಬಾ
ರಕ್ಷಿತಾ: ನಿನ್ನ ಬಿಟ್ಟ ಕ್ಷಣ ಇರೋಕ್ ಆಗಲ್ಲ… ನನಗೆ ನೀನು ಬೇಕು
ಮಂಜುನಾಥ್: ಊರಲ್ಲೆಲ್ಲಾ ಥೂ ಅಂತ ಉಗುಳಿದ್ರು ನಿನಗೆ ನಾನೇ ಬೇಕಲ್ಲ ಯಾಕೆ..?
ರಕ್ಷಿತಾ: ಜನ ಸಾವಿರ ಮಾತಾಡಲಿ. ನನಗೆ ನೀನು ಬೇಕು
ಮಂಜುನಾಥ್: ಇವೆಲ್ಲಾ ತೊಂದರೆ ನನಗೆ ಬೇಡ
ಮಂಜುನಾಥ್: ನಾನು ಅನುಭವಿಸಿರೋದೆ ಸಾಕು. ನನ್ನ ಕೇಸ್ ಇನ್ನೂ ಕೋರ್ಟ್ನಲ್ಲಿದೆ
ರಕ್ಷಿತಾ: ನೀನು ಇಲ್ಲ ಅಂದ್ರೆ ದೇವರಾಣೆ ನಾನು ಬದುಕಿರಲ್ಲ.
ಮಂಜುನಾಥ್: ಅವರೆಲ್ಲಾ ಅಷ್ಟು ಜನ ಇದ್ದಾರೆ…ಅವರಿಗೆ ಉತ್ತರ ಕೊಡೋಕ್ ಆಗಲ್ಲ, ನಾನು ಇರೋದು ಒಬ್ಬನೇ
ರಕ್ಷಿತಾ: ಏನು ಬೇಕಾದ್ರು ಮಾಡಲಿ ನಾವು ಹೋಗೋಣ ಬಾ, ನನಗೆ ನೀನು ಬೇಕು, ನೀನಿಲ್ಲ ಅಂದ್ರೆ ಏನಾದ್ರು ಕುಡಿದು ಸತ್ತೋಗ್ತೀನಿ
ಮಂಜುನಾಥ್: ಆತರಹ ಏನೂ ಮಾಡೋಕೆ ಹೋಗಬೇಡ…ನಾನು ಬರ್ತಿನಿ

Share This Article