ತುಮಕೂರು: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 24 ಜನ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗಿದೆ.
ನೂತನ ಪಠ್ಯಪುಸ್ತಕ ವಿಚಾರವಾಗಿ ಎನ್ಎಸ್ಯುಐ ಕಾರ್ಯಕರ್ತರು ಕೆಲದಿನಗಳ ಹಿಂದೆ ಪ್ರತಿಭಟನೆ ನಡೆಸಿ ಬಿ.ಸಿ ನಾಗೇಶ್ ಮನೆಗೆ ನುಗ್ಗಲು ಪ್ರಯತ್ನಿಸಿ ಮನೆಯಲ್ಲಿದ್ದ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಪ್ರಕರಣ ಸಂಬಂಧಿಸಿದಂತೆ ಎನ್ಎಸ್ಯುಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಈ ಪೈಕಿ ಇದೀಗ 24 ಜನ ಕಾರ್ಯಕರ್ತರು ತುಮಕೂರು ಜಿಲ್ಲಾ ಕೇಂದ್ರ ಕಾರಾಗೃಹದಿಂದ ಇಂದು ಬಿಡುಗಡೆಗೊಂಡಿದ್ದಾರೆ. ಇದನ್ನೂ ಓದಿ: ನಾಗೇಶ್ ಮನೆಗೆ ದಾಳಿ ನಡೆಸಿದವರು ತುಮಕೂರಿನವರಲ್ಲ : ಎಫ್ಐಆರ್ನಲ್ಲಿ ಏನಿದೆ?
24 ಜನ ಎನ್ಎಸ್ಯುಐ ಕಾರ್ಯಕರ್ತರ ಬಿಡುಗಡೆ ಸುದ್ದಿ ತಿಳಿಯುತ್ತಿದ್ದಂತೆ ಜೈಲಿನ ಮುಂಭಾಗ ನೂರಾರು ಎನ್ಎಸ್ಯುಐ ಕಾರ್ಯಕರ್ತರು ಜಮಾಯಿಸಿದ್ದರು. ಆರೋಪಿಗಳು ಬಿಡುಗಡೆಗೊಂಡು ಜೈಲಿನಿಂದ ಹೊರಬರುತ್ತಿದ್ದಂತೆ, ಜೈಲಿನ ಮುಂಭಾಗ ಎನ್ಎಸ್ಯುಐ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದ್ದಾರೆ.