ನವದೆಹಲಿ: ಭಯೋತ್ಪಾದನೆಯನ್ನು ಅಥವಾ ಭಯೋತ್ಪಾದನೆಯ (Terrorism) ಬೆದರಿಕೆಗಳನ್ನು ಯಾವುದೇ ಧರ್ಮ (Religion) ಅಥವಾ ಗುಂಪಿಗೆ ಹೋಲಿಕೆ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ.
ದೆಹಲಿಯ ಗೃಹ ಸಚಿವಾಲಯ ಆಯೋಜಿಸಿದ್ದ ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹ ಕುರಿತ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಭಯೋತ್ಪಾದನೆ (Terrorism) ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತಲೂ ಅಪಾಯಕಾರಿ. ಹಾಗಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಜನಾಂಗದ ಗುಂಪಿಗೆ ಹೋಲಿಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದೋರ್ಗೆ ಬಂದ ತಕ್ಷಣ ರಾಹುಲ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ
ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಹಿಂಚಾರ ನಡೆಸಲು, ಯುವಸಮೂಹವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳೋದು ಹಾಗೂ ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಭಯೋತ್ಪಾದಕರು ನಿರಂತರವಾಗಿ ಹೊಸ – ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ತಮ್ಮ ಗುರುತನ್ನು ಮರೆಮಾಚಲು ಡಾರ್ಕ್ನೆಟ್ (DrakNet) ಬಳಸುತ್ತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ
ಭಯೋತ್ಪಾದನಾ ಬೆದರಿಕೆಗಳು ವಿಶ್ವದ ಶಾಂತಿಗೆ ಭಂಗ ತರುತ್ತವೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಚಟುವಟಿಕೆಗಳ ನಿಧಿಗೆ ಹಣಕಾಸು ಹರಿದು ಬರೋದ್ರಿಂದಲೇ ಚಟುವಟಿಕೆ ಪೋಷಣೆಯಾಗುತ್ತಿದೆ. ಈ ಬೆಳವಣಿಗೆಯು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ಸಾಮೂಹಿಕ ಸಂಕಲ್ಪವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಕೆಲವು ದೇಶಗಳು ನಡೆಸುತ್ತಿವೆ. ಇದರ ಹೊರತಾಗಿಯೂ ಭಾರತ ಭಯೋತ್ಪಾದನೆ ನಿಗ್ರಹಿಸಲು ಆರ್ಥಿಕ ವ್ಯವಸ್ಥೆ ಹಾಗೂ ಕಾನೂನು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಶ್ಲಾಘಿಸಿದ್ದಾರೆ.