– ಓದಿದರೆ ಮಾತ್ರ ಬುದ್ಧಿ ಬರೋದು
ದಾವಣಗೆರೆ: ಅಂತರ್ಜಾತಿ ವಿವಾಹವಾಗುವವರಿಗೆ ಮಾತ್ರ ಸರ್ಕಾರಿ ಕೆಲಸ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತಹ ಕಾನೂನು ರಚನೆಯಾಗಬೇಕು. ಆಗ ಮಾತ್ರ ಸಮಾನತೆ ತರಲು ಸಾಧ್ಯ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಹರಿಹರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಮೇಲು ಕೀಳು ಹೋಗಿಲ್ಲ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳಲಾಗುತ್ತದೆ. ಆದರೆ ಯಾರೂ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಯಾರು ಅಂತರ್ಜಾತಿ ವಿವಾಹ ಆಗುತ್ತಾರೋ ಅವರಿಗೆ ಮಾತ್ರ ಸರ್ಕಾರಿ ನೌಕರಿ ಸಿಗುವಂತಾಗಬೇಕು. ಅಲ್ಲದೆ, ಅಂತಹವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಆ ರೀತಿಯ ಕಾನೂನನ್ನು ಜಾರಿಗೆ ತರಬೇಕು ಎಂದು ತಿಳಿಸಿದರು. ಇದನ್ನು ಓದಿ: ಎಂಎಂ ಕಲ್ಬುರ್ಗಿ ಹತ್ಯೆ ಕೇಸ್- 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ
ಪ್ರಸ್ತುತ ಭಾರತದಲ್ಲಿ ಜಾತಿಯೇ ಮುಖ್ಯ ಹೊರತು ಜ್ಞಾನಕ್ಕೆ ಬೆಲೆ ಇಲ್ಲ. ಎಲ್ಲರೂ ಮೊದಲು ಒಂದೇ ಜಾತಿಯವರು, ಕಾಲದ ನಂತರ ಜಾತಿಗಳಾಗಿವೆ. ಪುಸ್ತಕಗಳನ್ನು ಓದುವುದರಿಂದ ತಿಳುವಳಿಕೆ ಬರುತ್ತದೆ. ಅದನ್ನು ಬಿಟ್ಟು ದೇವಸ್ಥಾನ, ಮಸೀದಿಗಳಿಗೆ ಹೋಗುವುದರಿಂದ ಬುದ್ಧಿವಂತರಾಗುವುದಿಲ್ಲ. ಓದಿ ಬುದ್ಧಿಶಕ್ತಿ ಬೆಳಸಿಕೊಂಡಾಗ ಮಾತ್ರ ಬುದ್ಧಿವಂತರಾಗುತ್ತಾರೆ ಎಂದು ತಿಳಿಸಿದರು.
ಕಲಬುರ್ಗಿ ಹತ್ಯೆ ಕುರಿತು ಪ್ರತಿಕ್ರಿಯಿಸಲ್ಲ
ಈಗಾಗಲೇ ಎರಡು, ಮೂರು ಕೇಸ್ ಆಗಿದೆ. ನಾನೇನಾದರೂ ಮಾತನಾಡಿದರೆ ಮತ್ತೊಂದು ಕೇಸ್ ಬಿದ್ದು ಓಡಾಡುವ ಕೆಲಸವಾಗುತ್ತದೆ. ಈ ಕುರಿತು ಮೈಸೂರಿನಲ್ಲಿ ಮಾತನಾಡುತ್ತೇನೆ ಎಂದು ಪ್ರೊ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಲು ಭಗವಾನ್ ನಿರಾಕರಿಸಿದರು.
370ನೇ ವಿಧಿ ರದ್ದು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ, ಅದು ಮೋದಿಯವರ ಒಳ್ಳೆಯ ಕೆಲಸ. ಇಡೀ ಭಾರತದಲ್ಲಿ ಎಲ್ಲಾ ರಾಜ್ಯಗಳು ಸಮಾನ ಎಂದು ಸಾರಿದೆ. ತತ್ವ ಸಿದ್ಧಾಂತಗಳು ಏನೇ ಇದ್ದರು ಒಳ್ಳೆಯದನ್ನು ಮಾಡಿದಾಗ ಮೆಚ್ಚಬೇಕು, ಸ್ವಾಗತಿಸಬೇಕು. ಈ ಹಿಂದೆಯು ಮೋದಿಯವರು ಸಂವಿಧಾನ ರಾಷ್ಟ್ರ ಧರ್ಮ ಗ್ರಂಥ ಎಂದು ಹೇಳಿದ್ದರು ಅದನ್ನು ಮೆಚ್ಚಿ ಲೇಖನ ಬರೆದಿದ್ದೇನೆ. ವಿರೋಧ ಮಾಡುತ್ತೇವೆಂದು ಎಲ್ಲದನ್ನೂ ವಿರೋಧಿಸಬಾರದು ಎಂದು ಭಗವಾನ್ ಸ್ಪಷ್ಟಪಡಿಸಿದರು.