ಧಾರವಾಡ: ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಬಂದು ಜನರ ಕೈಗೆ ಕಳ್ಳನೊಬ್ಬ ಸಿಕ್ಕಿಹಾಕೊಕಿಕೊಂಡಿರುವ ಘಟನೆ ನಗರದ ಮಿಲ್ಟ್ರಿ ಕ್ಯಾಂಟಿನ್ ಬಳಿಯ ಗಾಳಿ ದುರ್ಗೆಮ್ಮ ದೇವಸ್ಥಾನದಲ್ಲಿ ನಡೆದಿದೆ.
ಹುಂಡಿ ಕದಿಯುವಾಗ ಆರೋಪಿ ರವಿ ಹುಬ್ಬಳ್ಳಿ ಸಿಕ್ಕಿ ಹಾಕಿಕೊಂಡಿದ್ದು, ಇವನು ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಬಂದಿದ್ದ ಎಂದು ತಿಳಿದಿದ್ದೇ ತಡ ಸ್ಥಳಿಯರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಈತ ದೇವಸ್ಥಾನದ ಬಳಿಯೇ ಸುತ್ತಾಡುತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಕಳ್ಳ ಸಿಕ್ಕ ತಕ್ಷಣ ಆತನಿಗೆ ದೇವಸ್ಥಾನದಲ್ಲಿ ಕೂಡಿ ಹಾಕಿ ಸ್ಥಳಿಯರು ಹೊಡೆದಿದ್ದಾರೆ. ನಂತರ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ದೇವಸ್ಥಾನದಲ್ಲಿ ಯಾರೂ ಇಲ್ಲದ ವೇಳೆ ಕಳ್ಳ ಹುಂಡಿಯಲ್ಲಿನ ಹಣ ಎಗರಿಸಲು ದಾರಕ್ಕೆ ಬಿಲ್ಲೆ ಕಟ್ಟಿ, ಅದಕ್ಕೆ ಅಂಟು ಹಚ್ಚಿ ಕಳ್ಳತನಕ್ಕೆ ಯತ್ನಿಸಿದ್ದ. ಆರೋಪಿ ಸಿಕ್ಕಿಬಿದ್ದಿರುವ ಕುರಿತು ಸ್ಥಳೀಯರು ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.