ಮಂಡ್ಯ: ನಿಮ್ಮ ಪರೀಕ್ಷೆ ಮುಗಿದಿದೆ, ಇದೀಗ ನನ್ನ ಎಕ್ಸಾಂ ಇದೆ. ನಾನು ಪರೀಕ್ಷೆ ಬರೀಬೇಕು, ನಿಮ್ಮ ಅಪ್ಪ-ಅಮ್ಮನಿಗೆ ಹೇಳಿ ಪಾಸ್ ಮಾಡಿಸಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಮಕ್ಕಳ ಜೊತೆ ಮಾತನಾಡಿದ್ದಾರೆ.
ರಾಯಸಮುದ್ರ ಗ್ರಾಮದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿ ನಿಂತಿದ್ದ ಚಿಕ್ಕ ಚಿಕ್ಕ ಮಕ್ಕಳು “ಕ್ರಮ ಸಂಖ್ಯೆ ಇಪ್ಪತ್ತು, ಕುಮಾರಸ್ವಾಮಿಗೆ ಆಪತ್ತು”, “ಗೆಲ್ತಾರಪ್ಪೊ ಗೆಲ್ತಾರೆ, ಸುಮಲತಾ ಗೆಲ್ತಾರೆ” ಘೋಷಣೆ ಕೂಗಿದರು.
ಮಕ್ಕಳು ಈ ರೀತಿ ಘೋಷಣೆ ಕೂಗಿದ್ದನ್ನು ಕಂಡು ಸುಮಲತಾ, “ನೀವೆಲ್ಲಾ ಚೆನ್ನಾಗಿ ಓದಿ ಪರೀಕ್ಷೆ ಬರೆದ್ರಾ?” ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು, “ಹಃ ಚೆನ್ನಾಗಿ ಬರೆದು ಪಾಸ್ ಆಗಿದ್ದೇವೆ” ಎಂದು ಉತ್ತರಿಸಿದರು. ಮತ್ತೆ ಸುಮಲತಾ ಅವರು, “ನಿಮ್ಮ ಎಕ್ಸಾಂ ಮುಗಿದಿದೆ, ಇದೀಗ ನನ್ನ ಎಕ್ಸಾಂ ಇದೆ. ನಾನು ಪರೀಕ್ಷೆ ಬರೆಯಬೇಕು, ನಿಮ್ಮಪ್ಪ ಅಮ್ಮನಿಗೆ ಹೇಳಿ ಪಾಸ್ ಮಾಡಿಸಿ. ಕ್ರಮಸಂಖ್ಯೆ, ಚಿಹ್ನೆ ಬಗ್ಗೆ ನಿಮ್ಮಪ್ಪ ಅಮ್ಮನಿಗೆ ಹೇಳಿಕೊಡಿ” ಎಂದ ಸುಮಲತಾ ಮಕ್ಕಳ ಜೊತೆ ಮನವಿ ಮಾಡಿದರು.
ಸುಮಲತಾ ಅವರು ಕೆಆರ್ ಪೇಟೆಯ ತೆಂಡೆಕೆರೆ, ಶೀಳನೆರೆ, ರಾಯಸಮುದ್ರ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ರಾಯಸಮುದ್ರದ ಗ್ರಾಮಸ್ಥೆಯೊಬ್ಬರು ಸುಮಲತಾ ಅವರಿಗೆ ರವಿಕೆ, ಬೆಲ್ಲ, ಅಕ್ಕಿ, ತೆಂಗಿನ ಕಾಯಿ, ಎಲೆ, ಅಡಿಕೆ ಸಮೇತ ಮಡಿಲು ತುಂಬಿ ಆಶೀರ್ವದಿಸಿದರು.